ತೆಲಸಂಗ: ‘ರಾಷ್ಟ್ರದ ಸ್ವಾಭಿಮಾನದ ಪ್ರತೀಕವಾದ ಶ್ರೀರಾಮ ಮಂದಿನ ನಿರ್ಮಾಣಕ್ಕೆ ಎಷ್ಟು ದೇಣಿಗೆ ನೀಡಿದ್ದೇವೆ ಅನ್ನುವುದು ಮುಖ್ಯವಲ್ಲ. ನಾವೆಲ್ಲರೂ ಪಾಲುದಾರಿಕೆ ವಹಿಸುವುದು ಮುಖ್ಯ’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದಲ್ಲಿ ಆರ್ಎಸ್ಎಸ್ನಿಂದ ನಡೆದ ‘ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ನನ್ನದೂ ಪಾಲಿದೆ ಎಂದು ಹೇಳುವುದೇ ಹೆಮ್ಮೆ. ಈ ಸೌಭಾಗ್ಯ ನಮಗೆ ದೊರೆತಿದ್ದು ಪೂರ್ವ ಜನ್ಮದ ಪುಣ್ಯ’ ಎಂದರು.
ಕುಂಬಾರ ಗುರುಪಿಠದ ಬಸವ ಗುಂಡಯ್ಯ ಸ್ವಾಮೀಜಿ, ‘ಭಾರತ ಎಂದಾಗ ಕಣ್ಮುಂದೆ ಬರುವುದು ಇಲ್ಲಿನ ಸಾಂಸ್ಕೃತಿಕ ಸಿರಿವಂತಿಕೆ. ಇಂತಹ ಹೆಮ್ಮೆಯ ಪ್ರತೀಕವಾದ ರಾಮ ಮಂದೀರ ನಿರ್ಮಾಣದ ಕಾಲದಲ್ಲಿ ನಾವೆಲ್ಲ ಇದ್ದೆವು ಎನ್ನುವುದು ಹೆಮ್ಮೆಯ ಸಂಗತಿ. ಅದರಲ್ಲೂ ನಮ್ಮ ಪಾಲದಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು ನಿಜಕ್ಕೂ ಶ್ರೇಷ್ಠ ಕಾರ್ಯ’ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಆರ್ಎಸ್ಎಸ್ ಮುಖಂಡರಾದ ಸಂತೋಷ ಕುಲಕರ್ಣಿ, ಕೇಶವ ಉಂಡೋಡಿ, ಜಗದೀಶ ಮಠದ, ಈಶ್ವರ ಉಂಡೋಡಿ, ಡಾ.ರಾವಸಾಬ ಬಡಿಗೇರ, ದಾನಪ್ಪ ಹತ್ತಿ, ದಯಾನಂದ ಕರ್ಣಿ, ಶಿವಯೋಗಿ ಹತ್ತಿ, ಅನಿಲ ಚವಾಣ, ಆನಂದ ಥೈಕಾರ ಇದ್ದರು.