ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪೂರ್ವಸಿದ್ಧತೆ: ರೈತರಿಗೆ ಸಲಹೆ

Last Updated 10 ಮೇ 2019, 9:57 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಹಂಗಾಮಿಗಾಗಿ ರೈತರು ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾಶಿ ಎಚ್. ಮೊಕಾಶಿ ಹಲವು ಸಲಹೆಗಳನ್ನು ನೀಡಿದ್ದಾರೆ.

* ಮಳೆ ಹನಿಗಳು ಬಹಳ ರಭಸವಾಗಿ ಬೀಳುವುದರಿಂದ ನೀರು ಕೊಚ್ಚಿಕೊಂಡು ಹೋಗುತ್ತದೆ. ಅದರೊಂದಿಗೆ ಮಣ್ಣು ಕೂಡ ಹರಿದು ಹೋಗುವುದನ್ನು ತಡೆಗಟ್ಟಬೇಕು. ಇದನ್ನು ತಡೆಯಲು, ಮಳೆ ನೀರನ್ನು ಬಿದ್ದ ಸ್ಥಳದಲ್ಲಿಯೇ ಸಂಗ್ರಹಿಸಬೇಕು. ಹರಿದು ಹೋಗುವ ನೀರನ್ನು ಉಪಯೋಗಿಸುವುದರಿಂದ ಮಳೆಯ ಸಮರ್ಥ ನಿರ್ವಹಣೆ ಸಾಧ್ಯವಾಗುತ್ತದೆ.

* ಹೊಲಗಳಿಗೆ ಬದುಗಳನ್ನು ಹಾಕಬೇಕು. ಬದುಗಳ ಮಧ್ಯದ ಭೂಮಿ ಮಟ್ಟಮಾಡುವುದು, ಸಮಪಾತಳೆ ಬೇಸಾಯ, ಮಾಗಿ ಉಳುಮೆ ಹಾಗೂ ಮಲ್ಚಿಂಗ್ ಮಾಡಬೇಕು, ಹರಿದು ಹೋಗುವ ನೀರನ್ನು ಹೊಂಡಗಳಲ್ಲಿ ಶೇಖರಿಸುವಂಥ ಮಣ್ಣು ಮತ್ತು ನೀರು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು.

* ಭೂಮಿಯ ಗುಣಧರ್ಮ, ಮಳೆ ಬೀಳುವ ಪ್ರಮಾಣ, ಅವಧಿ ಮತ್ತು ಮಣ್ಣಿನ ತೇವಾಂಶದ ಕ್ಷೀಣತೆ ಅವಧಿಗೆ ಅನುಗುಣವಾಗಿ ಬೆಳೆಗಳನ್ನು ಆರಿಸಬೇಕು. ಹವಾಮಾನಕ್ಕೆ ತಕ್ಕಂತೆ ಬೆಳೆ ತಳಿಗಳನ್ನು ಬದಲಿಸಬೇಕು. ಒಂದೇ ಬೆಳೆಗಿಂತ ಮಿಶ್ರಬೆಳೆ ಬೆಳೆಯುವುದು ಉತ್ತಮ. ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರುವುದನ್ನು ಗಮನಿಸಿ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು.

* ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಶಿಫಾರಸ್ಸು ಮಾಡಿದ ತಳಿಗಳನ್ನು ರಿಯಾಯತಿ ದರದಲ್ಲಿ ವಿತರಿಸಲು ಬೀಜದ ದಾಸ್ತಾನು ಮಾಡಲಾಗಿದೆ. ಪ್ರಮಾಣೀಕೃತ ಅಥವಾ ನಿಜಚೀಟಿ ಬಿತ್ತನೆ ಬೀಜವನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಬಿಲ್‌ ಪಡೆದು ಬೆಳೆ ಕಟಾವು ಆಗುವವರೆಗೂ ಕಾಪಾಡಿಕೊಳ್ಳಬೇಕು. ಇದಲ್ಲದೇ, ಬೀಜದ ಜೊತೆಗಿನ ಲೇಬಲ್ ಮತ್ತು ಖಾಲಿ ಚೀಲವನ್ನೂ ರೈತರು ಇಟ್ಟಿಕೊಳ್ಳುವುದು ಸೂಕ್ತ.

* ರೈತರು ತಮ್ಮಲ್ಲಿರುವ ಬಿತ್ತನೆಬೀಜ ಉಪಯೋಸಿದಲ್ಲಿ ಬೀಜದ ಮೊಳಕೆ ಪರೀಕ್ಷಿಸಿ, ಖಾತರಿಪಡಿಸಿಕೊಳ್ಳಬೇಕು. ಬಿತ್ತನೆ ಬೀಜ ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು. ಬೇಕಾದ ಪರಿಕರಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಬೀಜೋಪಚಾರ ಮಾಡುವುದರಿಂದ, ಮಣ್ಣಿನಿಂದ ತಗಲುವ ಮತ್ತು ಬೀಜದಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು.

* ಬಿತ್ತುವ 2–3 ವಾರಗಳು ಮುಂಚೆಯೇ ಕೊಟ್ಟಿಗೆ (ತಿಪ್ಪೆ) ಅಥವಾ ಕಾಂಪೋಸ್ಟ್‌ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಬೆಳೆಗಳಿಗೆ ಶಿಫಾರಸು ಮಾಡಿದ ರಸಾಯನಿಕ ಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ, ಪಿಒಎಸ್ ಯಂತ್ರದ ಮೂಲಕ ರಶೀದಿ ಪಡೆದುಕೊಳ್ಳಬೇಕು.

* ಬಹು ಬೆಳೆ, ಮಿಶ್ರ ಬೆಳೆ ಪದ್ಧತಿ ಜೊತೆಗೆ ಸಮಗ್ರ ಕೀಟ, ರೋಗ, ಪೋಷಕಾಂಶಗಳ ನಿರ್ವಹಣೆ ಅನುಸರಿಸಿದಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು.

‘ಮುಂಗಾರು ಹಂಗಾಮಿನ ಪೂರ್ವಸಿದ್ಧತೆಯಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಯೋಜನೆಗಳಡಿ ರಿಯಾಯತಿ ದರದಲ್ಲಿ ಕೃಷಿ ಪರಿಕರಗಳಾದ ಪ್ರಮಾಣೀಕೃತ ಬಿತ್ತನೆಬೀಜ, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳು, ರಸಾಯನಿಕ ಔಷಧಿಗಳು ಮೊದಲಾದವನ್ನು ದಾಸ್ತಾನು ಮಾಡಲಾಗಿದೆ. ರಸಗೊಬ್ಬರವೂ ದಾಸ್ತಾನಿದೆ. ಸದ್ಯ ಯಾವುದೇ ಕೃಷಿ ಪರಿಕರಗಳ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ರೈತರು ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಳ್ಳಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT