ಬೆಳಗಾವಿ: ‘ಸಂವಿಧಾನದ ಆಶಯಗಳನ್ನು ಎಲ್ಲರೂ ಅರಿಯಬೇಕು’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯಲು ಹಾಗೂ ಸಮಾನತೆ ತರಲು ಸಂವಿಧಾನವನ್ನು ಜಾರಿಗೆ ತರಲು ಅಂಗೀಕರಿಸಲಾಯಿತು. ಅಂದಿನಿಂದ ನ.26ನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ’ ಎಂದರು.
‘ಸಂವಿಧಾನದ ಮೂಲ ಆಶಯಗಳು ಮತ್ತು ಕಾನೂನು ಅಂಶಗಳನ್ನು ಬಹಳಷ್ಟು ಜನ ತಿಳಿದುಕೊಳ್ಳದೆ ಇರುವುದರಿಂದ ಸರ್ಕಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ಯುವ ಸಮುದಾಯಕ್ಕೆ ಸಂವಿಧಾನ ಓದುವ, ಚರ್ಚಿಸುವ ವಿಚಾರಸಂಕಿರಣಗಳನ್ನು ಆಯೋಜಿಸಲಾಗುವುದು’ ಎಂದರು.
‘ದೇಶದ ಪ್ರತಿ ಪ್ರಜೆಗೂ ಸಂವಿಧಾನದ ಅಡಿಯಲ್ಲಿ ಸಮಾನತೆ ಇದೆ. ಒಬ್ಬ ಸಾಮಾನ್ಯ ವ್ಯಕ್ತಿಯು ದೇಶದ ಉನ್ನತ ಸ್ಥಾನಕ್ಕೆ ಏರಬಹುದು. ಜಾತಿ–ಮತ–ಪಂಥ ಬಡವ-ಬಲ್ಲಿದ ಎನ್ನದೆ ಎಲ್ಲರೂ ಸಮಾನರು ಎನ್ನುವ ಸಂವಿಧಾನದ ಮೂಲ ಉದ್ದೇಶ ಈಗ ಸಂಪೂರ್ಣವಾಗಿ ಕುಟುಂಬ ರಾಜಕಾರಣ ಹೊರತುಪಡಿಸಿ ಅನುಷ್ಠಾನಗೊಳ್ಳುತ್ತಿರುವುದು ಭಾರತೀಯರಿಗೆ ಹೆಮ್ಮೆ ತರುವಂತಾಗಿದೆ’ ಎಂದು ಹೇಳಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಮಾತನಾಡಿದರು.
ಪ.ಜಾತಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜಿತೇಂದ್ರ ಮಾದರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಲ್ಲೇಶ ಕೋಲ್ಕಾರ, ರಾಜ್ಯ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪೃಥ್ವಿಸಿಂಗ್, ಮುಖಂಡ ಬಸವರಾಜ ಬಂಡಿವಡ್ಡರ ಇದ್ದರು.
ಮೋರ್ಚಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಜಯ ಮೂಲಿಮನಿ ನಿರೂಪಿಸಿದರು.