ಹೊಸಪೇಟೆ (ವಿಜಯನಗರ): ಕೋವಿಡ್–19 ನಡುವೆಯೂ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಮಂಗಳವಾರ ಆಂಜನೇಯ ಜಯಂತಿ ಶ್ರದ್ಧಾ, ಭಕ್ತಿಯಿಂದ ಸರಳ ರೀತಿಯಲ್ಲಿ ಆಚರಿಸಲಾಯಿತು.
ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಹುತೇಕ ಆಂಜನೇಯ ದೇವಸ್ಥಾನಗಳಿಗೆ ಬೀಗ ಜಡಿಯಲಾಗಿತ್ತು. ಆದರೆ, ಭಕ್ತರು ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋದರು. ಕೆಲವೆಡೆ ಅರ್ಚಕರು ಧಾರ್ಮಿಕ ವಿಧಿ ವಿಧಾನ ಮುಗಿಸಿ, ದೇವಸ್ಥಾನ ಮುಚ್ಚಿದರು.
ನಗರದ ಮೇನ್ ಬಜಾರ್ನಲ್ಲಿರುವ ವಡಕರಾಯ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಸಲ್ಲಿಸಿ, ದ್ವಾರ ಮುಚ್ಚಿದರು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು, ಬಾಗಿಲು ಮುಚ್ಚಿರುವುದು ನೋಡಿ ನಿರಾಸೆ ಪಟ್ಟರು. ದ್ವಾರದ ಬಳಿ ಹೋಗಿ ಆಂಜನೇಯನಿಗೆ ಹೊರಗಿನಿಂದಲೇ ನೋಡಿ, ಕೈಮುಗಿದು ತೆರಳಿದರು.
ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲೂ ಇಂತಹುದೇ ದೃಶ್ಯಗಳು ಕಂಡು ಬಂದವು. ಅಭಯ ಆಂಜನೇಯ ದೇವಸ್ಥಾನದಲ್ಲಿ ಕೆಲವು ಭಕ್ತರು ಬೆಳಿಗ್ಗೆಯೇ ಗುಡಿಯೊಳಗೆ ಹೋಗಿ ಹತ್ತಿರದಿಂದ ದರ್ಶನ ಪಡೆದರು. ಇನ್ನು, ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇತ್ತು. ಬಹುತೇಕರು ಮನೆಯಲ್ಲೇ ಆಂಜನೇಯನಿಗೆ ಪೂಜೆ ಸಲ್ಲಿಸಿ, ಸಮಾಧಾನ ಪಟ್ಟುಕೊಂಡರು.