ಹೊಸಪೇಟೆ: ಭಾರಿ ಮಳೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 350 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ನಷ್ಟವಾಗಿದೆ.
ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ಭಾನುವಾರವೂ ಮಳೆಯ ಆರ್ಭಟ ಮುಂದುವರಿಯಿತು. ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದರಿಂದ ನೆರೆ ಬಂದು ಕುರೇಕುಪ್ಪ, ವಡ್ಡು, ಬಸಾಪುರ, ತಾಳೂರು, ಬನ್ನಿಹಟ್ಟಿ, ನಾಗಲಾಪುರ, ಬನ್ನಿಹಟ್ಟಿ ಮತ್ತು ತಾರಾನಗರದಲ್ಲಿ ಬೆಳೆ ನಷ್ಟವಾಗಿದೆ.
ದರೋಜಿ ಕೆರೆ ಎರಡನೇ ಸಲ ತುಂಬಿ ಕೋಡಿ ಬಿದ್ದಿರುವುದರಿಂದ ಗ್ರಾಮದ ಸುತ್ತಮುತ್ತಲಿನ ಬೆಳೆ ಹಾಳಾಗಿದೆ. ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ, ಕರಿಬೇವು, ಕಲ್ಲಂಗಡಿ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಬೆಳೆಸಿದ್ದಾರೆ.
ಹೊಸಪೇಟೆಯಲ್ಲಿ ಶನಿವಾರ ರಾತ್ರಿ ಸುರಿದಿದ್ದ ಮಳೆ, ಭಾನುವಾರ ಸಂಜೆಯ ವರೆಗೆ ಬಿಡುವು ಕೊಟ್ಟಿತ್ತು. ಸಂಜೆಯ ನಂತರ ಬಿರುಸಾಗಿ ಸುರಿಯಿತು. ಕೂಡ್ಲಿಗಿ, ಕೊಟ್ಟೂರಿನಲ್ಲೂ ಮಳೆಯಾಗಿದೆ.