ಕಂಪ್ಲಿ–ಗಂಗಾವತಿ ಸೇತುವೆ ಮೇಲಿನಿಂದ ನೀರು ಹರಿಯುತ್ತಿದ್ದು, ಅದು ಸಹ ಯಾವುದೇ ಕ್ಷಣದಲ್ಲಿ ಮುಳುಗಡೆಯಾಗಬಹುದು. ಈಗಾಗಲೇ ಬ್ಯಾರಿಕೇಡ್ಗಳನ್ನು ಅಳವಡಿಸಿ, ಪೊಲೀಸ್ ಬಂದೋಬಸ್ತ್ ಮಾಡಿ ಸೇತುವೆ ಮೇಲೆ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕಂಪ್ಲಿ–ಗಂಗಾವತಿ ನಡುವಿನ ಸಂಪರ್ಕ ಕಡಿದುಹೋಗಿದೆ. ಕೋಟೆ ಪ್ರದೇಶಕ್ಕೂ ನೀರು ನುಗ್ಗುವ ಆತಂಕ ಎದುರಾಗಿದೆ.
ಸೇತುವೆ ಮೇಲೆ ಸಂಪರ್ಕ ನಿರ್ಬಂಧಿಸಿರುವುದರಿಂದ ಕಲಬುರ್ಗಿ, ರಾಯಚೂರು, ಮಂತ್ರಾಲಯ, ಹೈದರಾಬಾದ್ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಪಟ್ಟಣಗಳ ಜತೆಗಿನ ಸಂಪರ್ಕ ಕಡಿತಗೊಂಡಿದೆ.