ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಪ್ಲಾಸ್ಟಿಕ್‌ಮುಕ್ತ ಪ್ರದರ್ಶನದತ್ತ ಜನರ ಚಿತ್ತ

Last Updated 4 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದತ್ತ ‘ಸಿಲಿಕಾನ್‌ ಸಿಟಿ’ ಜನರ ಚಿತ್ತ. ಡಾ.ರಾಜ್, ಪುನೀತ್ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಎರಡು ವರ್ಷಗಳಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಈ ಸಲ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜ್ ಮತ್ತು ಪುನೀತ್‌ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನವು ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ಮುಕ್ತವಾಗಿರಲಿದೆ.

‘ಬಿಬಿಎಂಪಿ, ಸಾಹಸ್, ಬ್ಯೂಟಿಫುಲ್‌ ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ಸ್ವಚ್ಛ ಮತ್ತು ಸುಂದರವಾಗಿ ಕಾಣಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಬಿಎಂಪಿ ವತಿಯಿಂದ ಮಾರ್ಷಲ್‌ಗಳು, ಪೊಲೀಸ್‌ ಸಿಬ್ಬಂದಿಯೂ ನಮ್ಮ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ’ ಎಂದು ಸಾಹಸ್‌ ಎನ್‌ಜಿಒ ನಿರ್ದೇಶಕಿ ಸುನೀತಾ ಜಯರಾಮ್ ಮಾಹಿತಿ ನೀಡಿದರು.

ಆಗಸ್ಟ್‌ 5ರಿಂದ 15ರ ತನಕ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ 12–15 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಪ್ರದರ್ಶನದಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ. ಆದರೆ ಹಸಿ ಕಸವನ್ನು ಕಾಂಪೋಸ್ಟ್‌ ಮಾಡಲಾಗುತ್ತದೆ. ಸಾಹಸ್ ಹಾಗೂ ಬ್ಯೂಟಿಫುಲ್ ಬೆಂಗಳೂರು ಸಂಸ್ಥೆಗಳು ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ಸಾರ್ವಜನಿಕರಿಗೆ ಕಸ ವಿಲೇವಾರಿ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧದ ಕುರಿತು ಜಾಗೃತಿ ಮೂಡಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಸ್ವಯಂ ಸೇವಕರ ಪಾತ್ರ:ಫಲಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗುವ ಹೆಚ್ಚುವರಿ ಸಿಬ್ಬಂದಿಗೆ ಜಾಗೃತಿ ಸಭೆ, ಮಳಿಗೆಗಳಲ್ಲಿ ಉತ್ಪಾದಿಸಿದ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ತೊಟ್ಟಿಗಳನ್ನು ಮೀಸಲಿಡಲಾಗಿದೆ. ಪೊಲೀಸ್‌ ಮತ್ತು ಲಾಲ್‌ಬಾಗ್‌ ಅಧಿಕಾರಿಗಳಿಗೆ ಮೀಸಲಿರುವ ಆಹಾರ ಕೇಂದ್ರಗಳಲ್ಲಿ ಸ್ಟಿಲ್‌ ವಸ್ತುಗಳ ಬಳಕೆಗೆ ಆದ್ಯತೆ.

ತ್ಯಾಜ್ಯದ ಮೂಲದಲ್ಲೇ ಪ್ರತ್ಯೇಕತೆ ಬಗ್ಗೆ ಅರಿವು ಮೂಡಿಸಲಾಗುವುದು. ಎರಡು ಬಣ್ಣದ ತೊಟ್ಟಿಗಳ ಉದ್ದೇಶ
ವನ್ನು ಸಂದರ್ಶಕರಿಗೆ ವಿವರಿಸಿ ಅವುಗಳ ಬಳಕೆಗೆ ಮಾರ್ಗದರ್ಶನ ನೀಡಲಾಗುವುದು. ಅಗತ್ಯವಿರುವ ಕಡೆ ಸಾಹಸ್ ಸಂಸ್ಥೆಯಿಂದ ಹೆಚ್ಚುವರಿ ತೊಟ್ಟಿಗಳನ್ನೂ ಇಡಲಾಗುವುದು. ಲಾಲ್‌ಬಾಗ್‌ ಆವರಣದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ಅಲ್ಲಲ್ಲಿ ಖನಿಜಯುಕ್ತ ನೀರಿನ ವ್ಯವಸ್ಥೆ ಮಾಡಲಾಗಿದೆ.

ಇಂದು ಚಾಲನೆ

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ವತಿಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಡಾ.ರಾಜ್‌ ಕುಟುಂಬದವರಾದ ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಭಾಗವಹಿಸಲಿದ್ದಾರೆ.

‘ಆಗಸ್ಟ್‌ 5ರಂದು ಬೆಳಿಗ್ಗೆ 8ರಂದು ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌ ಮತ್ತು ಪುನೀತ್‌ ರಾಜ್‌ಕುಮಾರ್ ಸ್ಮಾರಕ ಸ್ಥಳದಿಂದ ಲಾಲ್‌ಬಾಗ್‌ ಗಾಜಿನ ಮನೆಯವರಿಗೆ ಜ್ಯೋತಿಯಾತ್ರೆ ಮತ್ತು ನಮ್ಮ ನಿಮ್ಮಿ ಸೈಕಲ್‌ ಫೌಂಡೇಷನ್‌ ಮುಖ್ಯಸ್ಥ ಎಚ್.ಆರ್. ಮುರಳಿ ನೇತೃತ್ವದಲ್ಲಿ ಪುನೀತ್‌ ಚಿತ್ರ ಇರುವ ಟಿ–ಶರ್ಟ್‌ ತೊಟ್ಟ 100ಕ್ಕೂ ಹೆಚ್ಚು ಸೈಕಲ್‌ ಯಾತ್ರಿಗಳು ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಪ್ರದರ್ಶನ ಮುಕ್ತಾಯವಾಗುವವರೆಗೂ ಜ್ಯೋತಿ ಬೆಳಗಲಿದೆ.

ವಾಹನ ನಿಲುಗಡೆಗೆ ವ್ಯವಸ್ಥೆ

ಬೆಂಗಳೂರು: ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇರುವುದರಿಂದ, ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲಾಲ್‌ಬಾಗ್ ಉದ್ಯಾನ ಎದುರಿನ ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅದರಂತೆ, ಸಾರ್ವಜನಿಕರ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗಿದೆ.

‘ಡಾ. ಮರಿಗೌಡ ರಸ್ತೆ, ಲಾಲ್‌ಬಾಗ್ ರಸ್ತೆ, ಕೆ.ಎಚ್. ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಿಎಂಟಿಸಿ ಬಸ್, ಮೆಟ್ರೊ ಹಾಗೂ ಕ್ಯಾಬ್ ಬಳಸಿ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು:

*ಡಾ. ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ ಎರಡೂ ಬದಿ; ಕೆ.ಎಚ್. ರಸ್ತೆಯಲ್ಲಿ ಕೆ.ಎಚ್. ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗಿನ ಎರಡೂ ಬದಿ

*ಲಾಲ್‌ಬಾಗ್ ರಸ್ತೆಯ ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯ
ದ್ವಾರದವರೆಗೆ; ಸಿದ್ಧಯ್ಯ ರಸ್ತೆಯ ಊರ್ವಶಿ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್‌ನ 12ನೇ ಅಡ್ಡರಸ್ತೆಯವರೆಗೆ; ಬಿ.ಟಿ.ಎಸ್ ರಸ್ತೆಯ ಎರಡೂ ಬದಿ

ವಾಹನಗಳ ನಿಲುಗಡೆಗೆ ಅವಕಾಶವಿರುವ ಸ್ಥಳಗಳು:

*ಡಾ. ಮರಿಗೌಡ ರಸ್ತೆಯ ಆಲ್ ಅಮೀನ್ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ; ಶಾಂತಿನಗರದ ಬಿಎಂಟಿಸಿ ಬಸ್ ಡಿಪೊ
ಮೇಲ್ಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆ

*ಡಾ. ಮರಿಗೌಡ ರಸ್ತೆಯ ಹಾಪ್‌ಕಾಮ್ಸ್‌ ಸ್ಥಳದಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅವಕಾಶ

*ಜೆ.ಸಿ.ರಸ್ತೆಯ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT