ಬೆಂಗಳೂರು: ಅತ್ಯಾಧುನಿಕ ತಂತ್ರ ಜ್ಞಾನ ಆಧಾರಿತ ಆಂಬುಲೆನ್ಸ್ ನಿರ್ವ ಹಣಾ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿನ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳಿಸುವುದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದೆ.
ಈ ಕುರಿತಂತೆ ‘ಭಾರತ್ ಪುನರುತ್ಥಾನ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲ ವಿಜಯಕುಮಾರ್ ಎ.ಪಾಟೀಲ, ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಸಲ್ಲಿಸಿರುವ ವೇಳಾಪಟ್ಟಿಯನ್ನು ನ್ಯಾಯಪೀಠಕ್ಕೆ ನೀಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಯೋಜನೆ ಜಾರಿಗೆ ವಿಳಂಬ ಮಾಡದಂತೆ, ವೇಳಾಪಟ್ಟಿಗೆ ಬದ್ಧವಾಗಿರಬೇಕು. ಟೆಂಡರ್ ಪ್ರಕ್ರಿಯೆಯ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು‘ ಎಂದು ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿದೆ.
ವೇಳಾಪಟ್ಟಿಯಲ್ಲಿ ಏನಿದೆ?: 'ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯಿಂದ 2022ರ ಆಗಸ್ಟ್ 29ರೊಳಗೆ ಅನು ಮೋದನೆ ಸಿಗುವ ಸಾಧ್ಯತೆಯಿದೆ. ಆಗಸ್ಟ್ 30ರಂದು ಟೆಂಡರ್ ಆಹ್ವಾನಿ ಸಲಾಗುವುದು.ಅ.17ರಂದು ದರ ಪ್ರಸ್ತಾವನೆ ಆರಂ ಭಿಸಿ, ನಂತರದ 15 ದಿನದಲ್ಲಿ ಯಶಸ್ವಿ ಸೇವಾದಾರರಿಗೆ ಕೋರಿಕೆ ಪತ್ರ ನೀಡಲಾಗುವುದು’ ಎಂದು ವಿವರಿಸಲಾಗಿದೆ.