ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದ ಕಾರ್ಮಿಕ ತಾಯಪ್ಪ (20) ಎಂಬುವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
‘ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡಿರುವ ತಾಯಪ್ಪ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ರಾಯಚೂರು ಜಿಲ್ಲೆಯ ದೇವದುರ್ಗದ ತಾಯಪ್ಪ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಅದೇ ಕಟ್ಟಡದಲ್ಲೇ ವಾಸವಿದ್ದರು.’
‘ತಾಯಪ್ಪ ಎಂದಿನಂತೆ ಕಟ್ಟಡದಲ್ಲಿ ಮಲಗಿದ್ದರು. ತಡರಾತ್ರಿ ಕಟ್ಟಡದೊಳಗೆ ನುಗ್ಗಿದ್ದ ಆರೋಪಿಗಳು, ದಾಳಿ ಮಾಡಿ ಚಾಕುವಿನಿಂದ ಇರಿದು ಓಡಿ ಹೋಗಿದ್ದಾರೆ. ಅವರು ಯಾರು ಎಂಬುದು ತಾಯಪ್ಪ ಅವರಿಗೆ ಗೊತ್ತಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಹೇಳಿಕೆ ಪಡೆಯಲಾಗುವುದು’ ಎಂದೂ ತಿಳಿಸಿವೆ.