ಬೆಂಗಳೂರು: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಈ ಬಾರಿ ಅತ್ಯಂತ ಸರಳ ವಾಗಿ ಆಚರಿಸಿದರು. ಕೊರೊನಾ ಸೋಂಕು ವ್ಯಾಪಕವಾಗಿರುವುದರಿಂದ, ಮಸೀದಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಹಬ್ಬದ ಸಂಪ್ರದಾಯವಾದ ಕೈ ಕುಲುಕುವುದು ಹಾಗೂ ಆಲಿಂಗನ ಮಾಡಿಕೊಳ್ಳಲು ಈ ಬಾರಿ ಅವಕಾಶ ಇರಲಿಲ್ಲ. ನಮಾಜ್ ವೇಳೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸ ಲಾಗಿತ್ತು.
ಕಲಾಸಿಪಾಳ್ಯ, ಚಾಮರಾಜಪೇಟೆ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಬಿಟಿಎಂ ಬಡಾವಣೆ, ಪಾದರಾಯನಪುರ, ಶಿವಾಜಿನಗರ, ಹೆಬ್ಬಾಳ, ಆರ್.ಟಿ.ನಗರದ ಪ್ರಮುಖ ಮಸೀದಿಗಳಲ್ಲಿ ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಈದ್ ಸಾಮೂಹಿಕ ಪ್ರಾರ್ಥನೆ ನಡೆದವು.
ಕೊರೊನಾ ಸೋಂಕು ಹರಡುವಿಕೆ ತಡೆಯಲು ಮಸೀದಿಗಳಲ್ಲಿ ಪ್ರಾರ್ಥನೆಗೆ ಬರುವವರ ದೇಹದ ಉಷ್ಣಾಂಶ ಪರೀಕ್ಷೆ ಹಾಗೂ ಸ್ಯಾನಿಟೈಸರ್ ಬಳಸಿ ಕೈತೊಳೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮುಖಗವಸು ಧರಿಸಿದವರಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ ಕಲ್ಪಿ ಸಲಾಯಿತು. ಮಸೀದಿಗಳಲ್ಲಿ ಹೆಚ್ಚು ಮಂದಿ ಸೇರಲು ಅನುಮತಿ ಇಲ್ಲದ ಕಾರಣ ನಿಗದಿತ ಸಂಖ್ಯೆಯ ಜನರಿಗೆ ಪ್ರಾರ್ಥನೆ ಸಲ್ಲಿಸಲು ಗುರುತಿನ ಚೀಟಿ ನೀಡಲಾಗಿತ್ತು.