ಶನಿವಾರ, ಏಪ್ರಿಲ್ 1, 2023
32 °C

‘ಗುತ್ತಿಗೆದಾರರ ಅನುಕೂಲಕ್ಕೆ ಒವಿಡಿಎಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ‘ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವ‌ಸ್ಥೆ’ (ಒವಿಡಿಎಸ್‌) ಅಳವಡಿಸಿ, ಕಾಮಗಾರಿಗಳ ಬಾಕಿ ಬಿಲ್‌ ಪಾವತಿಸಲಾಗುವುದು. ಈ ವ್ಯವಸ್ಥೆಯಲ್ಲೂ ಬಿಲ್‌ಗಳ ಜ್ಯೇಷ್ಠತೆ ಆಧಾರದಲ್ಲಿಯೇ ಹಣ ಪಾವತಿಸಲಾಗುವುದು. ಸುಳ್ಳು ಬಿಲ್‌ ಸಲ್ಲಿಸಿ ಹಣ ಪಡೆಯಲು ಅವಕಾಶ ಇಲ್ಲ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ತಿಳಿಸಿದ್ದಾರೆ.

ಒವಿಡಿಎಸ್‌ ಅಳವಡಿಸುವುದಕ್ಕೆ ಗುತ್ತಿಗೆದಾರರು ವ್ಯಕ್ತಪಡಿಸಿರುವ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ಅವರು, ‘2020 ಡಿಸೆಂಬರ್‌ವರೆಗಿನ ಬಿಲ್‌ಗಳನ್ನು ಈಗಾಗಲೇ ಪಾವತಿಸಲಾಗಿದೆ. ನಂತರ 2 ವರ್ಷಗಳ ಬಾಕಿ ಬಿಲ್‌ ಸುಮಾರು ₹ 2,700 ಕೋಟಿ ಪಾವತಿಸಿ ಗುತ್ತಿಗೆದಾರರ ಸಂಕಷ್ಟ ಪರಿಹರಿ
ಸಲು ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ’ ಎಂದರು.

‘ಕೆಲವು ಗುತ್ತಿಗೆದಾರರು ಶೇ 24, ಇನ್ನೂ ಕೆಲವರು ಶೇ 36ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದು ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಅಂಥವರಿಗೆ ಬ್ಯಾಂಕಿನಿಂದ ಸಾಲ ಪಡೆದು ನೆರವಾಗಬೇಕೆಂಬ ಕಾರಣಕ್ಕೆ ಈ ವ್ಯವಸ್ಥೆ. ಅಗತ್ಯ ಇರುವ ಗುತ್ತಿಗೆದಾರರು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಳ್ಳಬಹುದು. ಆರ್‌ಬಿಐ ಮಾರ್ಗಸೂಚಿ ಪ್ರಕಾರ 6 ತಿಂಗಳ ಅವಧಿಗೆ ಮಾತ್ರ ಬಿಲ್ ಡಿಸ್ಕೌಂಟಿಂಗ್‌ ಮಾಡಬಹುದು. ಮರುಪಾವತಿ ಅವಧಿಯ ಬಡ್ಡಿಯನ್ನು ಗುತ್ತಿಗೆದಾರರು ಕೊಡಬೇಕಿದೆ’ ಎಂದು ಸಮರ್ಥಿಸಿದರು.

‘ಗುತ್ತಿಗೆದಾರರು ಆರೋಪಿಸಿದಂತೆ, ಇದು ಅವ್ಯವಹಾರವಲ್ಲ, ಗುತ್ತಿಗೆದಾರರ ಅನುಕೂಲಕ್ಕಾಗಿ ಈ ವ್ಯವಸ್ಥೆ ಅಳವಡಿಸಲು ನಾನೇ ಆಸಕ್ತಿ ವಹಿಸಿದ್ದೆ. ಬಿಲ್‌ ಡಿಸ್ಕೌಂಟಿಂಗ್‌ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು ಎನ್ನುವುದು ಕಾಕತಾಳೀಯ. ಬೇನಾಮಿ ಹೆಸರಿನಲ್ಲಿ ನಡೆಯುವ ಕಾಮಗಾರಿಗಳಿಗೂ ನಮಗೂ ಸಂಬಂಧ ಇಲ್ಲ. ಟೆಂಡರ್‌ ನಲ್ಲಿ ತಾಂತ್ರಿಕವಾಗಿ ಅರ್ಹರಾದ ಯಾರು ಬೇಕಾದರೂ ಗುತ್ತಿಗೆ ವಹಿಸಿಕೊಳ್ಳಬಹುದು. ಸುಳ್ಳು ಬಿಲ್‌ ಎನ್ನುವುದು ಮೇಲ್ನೋಟಕ್ಕೆ ಗೊತ್ತಾದರೆ ತಾಂತ್ರಿಕ ಮತ್ತು ಜಾಗೃತ ಕೋಶದ ಎಂಜಿನಿಯರ್‌ ಮೂಲಕ ಪರಿಶೀಲನೆ ನಡೆಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು