ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ ರದ್ದು: SSLC ಪರೀಕ್ಷೆ ಇದ್ದರೂ ಅನುತ್ತೀರ್ಣ ಇಲ್ಲ

ಪಿಯುಗೆ ರದ್ದು; ಎಸ್ಸೆಸ್ಸೆಲ್ಸಿಗೆ ಗುದ್ದು
Last Updated 4 ಜೂನ್ 2021, 23:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆರು ದಿನಗಳ ಬದಲಿಗೆ ಸರಳೀಕರಿಸಿದ ವಿಧಾನದಲ್ಲಿ ಎರಡು ದಿನ ನಡೆಸಲು ನಿರ್ಧರಿಸಿದೆ.

ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಪೋಷಕರು, ಶಾಲಾ–ಕಾಲೇಜು ಆಡಳಿತ ಮಂಡಳಿಗಳು, ಶಿಕ್ಷಣ ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

‘ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು, ಅವರ ಆರೋಗ್ಯಕ್ಕೂ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರು ಈ ಹಿಂದೆ ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಗ್ರೇಡ್‌ ನೀಡಿ ಪ್ರಕಟಗೊಳಿಸಲು ತೀರ್ಮಾನಿಸಲಾಗಿದೆ. ಜೂನ್ ಅಂತ್ಯಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಈ ಫಲಿತಾಂಶವು ಯಾವುದೇ ವಿದ್ಯಾರ್ಥಿಗೆ ತೃಪ್ತಿಕರವಾಗದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.

‘ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಫಲಿತಾಂಶವನ್ನು ಗ್ರೇಡ್ ಆಧಾರದಲ್ಲಿ ಪ್ರಕಟಿಸಲು ಯಾವುದೇ ಸ್ಪಷ್ಟ ದಾಖಲೆಗಳು ಲಭ್ಯ ಇರುವುದಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇಲಾಖೆ ನಡೆಸುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

ಅನುತ್ತೀರ್ಣ ಇಲ್ಲ:‘ಕಳೆದ ವರ್ಷ ಒಂಬತ್ತನೆಯ ತರಗತಿಯ ಪರೀಕ್ಷೆ ನಡೆಸಿರಲಿಲ್ಲ. ಅದಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ. ಪ್ರಶ್ನೆಗಳು ತುಂಬಾ ಸರಳವಾಗಿದ್ದು, ನೇರವಾಗಿರುತ್ತವೆ. ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣಗೊಳಿಸುವುದಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಆರು ಸಾವಿರ ಪರೀಕ್ಷಾ ಕೇಂದ್ರಗಳನ್ನು ರಚಿಸಿ, ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯಂತೆ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿಯು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕಾದುದು ಕಡ್ಡಾಯ’ ಎಂದೂ ಹೇಳಿದರು.

ಜುಲೈ ಮೂರನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬಹುದು. ಆದರೂ, ಆರೋಗ್ಯ ಇಲಾಖೆಯ ಸಲಹೆ ಪಡೆದು 20 ದಿನಗಳ ಮುಂಚೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದರು.

ಹೇಗಿರಲಿದೆ ಎಸ್ಸೆಸ್ಸೆಲ್ಸಿ ಪರೀಕ್ಷೆ?

* ಆರು ದಿನದ ಬದಲು ಎರಡೇ ದಿನ ಪರೀಕ್ಷೆ
* ವಿಜ್ಞಾನ, ಗಣಿತ, ಸಮಾಜವಿಜ್ಞಾನದ ಒಂದು ಪತ್ರಿಕೆ
* ಪ್ರಥಮ, ದ್ವಿತೀಯ, ತೃತೀಯ ಭಾಷೆಯ ಒಂದು ಪತ್ರಿಕೆ
* ಪ್ರತಿ ವಿಷಯಕ್ಕೆ 40 ಪ್ರಶ್ನೆಗಳು, ಒಂದು ಪತ್ರಿಕೆಗೆ 120 ಅಂಕ
* ಬೆಳಿಗ್ಗೆ 10.30ರಿಂದ 1.30ರವರೆಗೆ– 3 ತಾಸಿನ ಪರೀಕ್ಷೆ
* ಒಎಂಆರ್‌ ಶೀಟ್‌ ಮಾದರಿಯ ಉತ್ತರ ಪತ್ರಿಕೆ
* ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಎ,ಬಿ ಮತ್ತು ಸಿ ಗ್ರೇಡ್‌
* ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡಿ ಉತ್ತೀರ್ಣ
* ಕೋವಿಡ್‌ನಿಂದ ಪರೀಕ್ಷೆಗೆ ಗೈರಾದವರಿಗೆ ಮಾತ್ರ ಪೂರಕ ಪರೀಕ್ಷೆ

‘ಅಪ್ರಬುದ್ಧ ನಿರ್ಧಾರ’

‘18 ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿ, 16 ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವುದು ಅಪ್ರಬುದ್ಧ, ಅಜ್ಞಾನದ ನಿರ್ಧಾರ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ದೂರಿದರು.

‘ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲಾಗಿದೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಮಾತ್ರ ಏಕೆ ಪರೀಕ್ಷೆ ಬರೆಯಬೇಕು. ಇದು ತಾರತಮ್ಯ ಮತ್ತು ಸಂವಿಧಾನಕ್ಕೆ ವಿರುದ್ಧವಾದದ್ದು’ ಎಂದರು.

‘ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ ಆಗಿದ್ದರೆ, ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ, ವಿದ್ಯಾರ್ಥಿಯ ನಿವಾಸದ ಸುತ್ತ–ಮುತ್ತಲಿನ ಕಾಲೇಜುಗಳಲ್ಲಿಯೇ ಪ್ರವೇಶ ದೊರಕಿಸಿಕೊಡಬೇಕು. ಹೆಚ್ಚು ವಿದ್ಯಾರ್ಥಿಗಳು ಇದ್ದರೆ ಲಾಟರಿ ಮೂಲಕ ಆಯ್ಕೆ ಮಾಡಿ ಪ್ರವೇಶ ನೀಡಬೇಕು’ ಎಂದೂ ಅವರು ಸಲಹೆ ನೀಡಿದರು.

‘ದ್ವಿತೀಯ ಪಿಯುಸಿಗೂ ಪರೀಕ್ಷೆ ನಡೆಸಲಿ’

‘ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆ ಎಲ್ಲರನ್ನೂ ಉತ್ತೀರ್ಣಗೊಳಿಸಿದರೆ, ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಾಬಿ ಹೆಚ್ಚಲಿದೆ. ಶ್ರೀಮಂತರ ಮಕ್ಕಳು ಮಾತ್ರ ಪ್ರವೇಶ ಗಿಟ್ಟಿಸಿಕೊಳ್ಳಲಿದ್ದು, ಪ್ರತಿಭಾವಂತ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಎಸ್ಸೆಸ್ಸೆಲ್ಸಿ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಸರಳವಾಗಿ ಪರೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಉಳ್ಳಾಲದ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಸುಪ್ರೀತ್ ಒತ್ತಾಯಿಸಿದರು.

‘ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷೆ ಇರುತ್ತದೆ. ಅವರ ಮೌಲ್ಯಮಾಪನ ನಿಯಮಿತವಾಗಿ ನಡೆಯುತ್ತಿರುತ್ತದೆ. ಆದರೆ, ರಾಜ್ಯ ಪಠ್ಯಕ್ರಮದಲ್ಲಿ ಅಂತಿಮ ಪರೀಕ್ಷೆಯ ಫಲಿತಾಂಶ ಅಳೆಯಲಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಪ್ರಥಮ ಪಿಯುಸಿಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಈ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದವರೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಬಂದ ಉದಾಹರಣೆ ಇದೆ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ಪರೀಕ್ಷೆ ನಡೆಸಬೇಕು’ ಎಂದು ಹೇಳಿದರು.

‘ಮಕ್ಕಳು ಸತ್ತರೆ ಹೊಣೆ ಯಾರು?’

‘ಪರೀಕ್ಷೆ ನಡೆಸಲು ಸರ್ಕಾರ ಇಷ್ಟೇಕೆ ಅವಸರ ತೋರುತ್ತಿದೆಯೋ ಗೊತ್ತಾಗುತ್ತಿಲ್ಲ. ಮಕ್ಕಳು ಸತ್ತರೆ ಅದರ ಹೊಣೆ ಹೊತ್ತುಕೊಳ್ಳಲು ಸರ್ಕಾರ ಸಿದ್ಧವಿದೆಯೇ? ಎರಡು ದಿನ ಪರೀಕ್ಷೆ ಬರೆದ ಮೇಲೆ ಮಕ್ಕಳು ಕೋವಿಡ್‌ ಬಂದು ಸಾವನ್ನಪ್ಪಿದ ನಂತರ, ಇನ್ನು ಮುಂದೆ ಇಂತಹ ಪರೀಕ್ಷೆ ನಡೆಸುವುದಿಲ್ಲ ಎಂದು ಸರ್ಕಾರ ಹೇಳಿದರೆ ಅದಕ್ಕೆ ಅರ್ಥವಿದೆಯೇ’ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರೂ ಆಗಿರುವ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಪ್ರಶ್ನಿಸಿದರು.

‘ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಪರೀಕ್ಷೆ ನಡೆಸಲೇಬೇಕೆಂದಾದರೆ ಸೆಪ್ಟೆಂಬರ್‌ನಲ್ಲಿ ನಡೆಸಲಿ’ ಎಂದೂ ಅವರು ಸಲಹೆ ನೀಡಿದರು.

‘ಪರೀಕ್ಷೆಗೆ ಮಕ್ಕಳನ್ನು ಕಳುಹಿಸಬೇಕೆ, ಬೇಡವೇ ಎಂಬುದರ ಬಗ್ಗೆಯೇ ನಮಗೆ ಗೊಂದಲವಿದೆ. ಇದೇ ರೀತಿ ಬಹು ಆಯ್ಕೆಯ ಪ್ರಶ್ನೆಗಳ ಪರೀಕ್ಷೆ ನಡೆಸಿದರೆ, ಇದೇ ವ್ಯವಸ್ಥೆ ಮುಂದುವರಿಯುವ ಅಪಾಯವೂ ಇದೆ. ನನಗೆ ತಿಳಿದಂತೆ ಯಾವ ಪೋಷಕರೂ ಪರೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿಲ್ಲ’ ಎಂದು ಪೋಷಕ ಸಿ.ಎಸ್. ಜನಾರ್ದನ ಹೇಳಿದರು.

‘ಸರ್ಕಾರದ ನಿರ್ಧಾರ ಸ್ವಾಗತಾರ್ಹ’

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್‌ಕುಮಾರ್‌, ಮಕ್ಕಳ ಉತ್ತಮ ಭವಿಷ್ಯಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಕಬೀರ್ ಟ್ರಸ್ಟ್‌ನ ಟಿ. ಪ್ರಭಾಕರ್‌ ಹೇಳಿದ್ದಾರೆ.

‘ಆದರೆ, 120 ಬಹುಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಲು ಮೂರು ತಾಸುಗಳ ಸಮಯ ಹೆಚ್ಚು ಎನಿಸುತ್ತದೆ. ಅದರ ಬದಲು, ಒಂದು ಪ್ರಶ್ನೆಗೆ ಒಂದು ನಿಮಿಷದಂತೆ 120 ನಿಮಿಷ ಅವಧಿ ನಿಗದಿ ಮಾಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT