ಬೆಂಗಳೂರು: ‘ಉದ್ಯಮಶೀಲತೆಯಲ್ಲಿ ಡಿಜಿಟಲೀಕರಣದ ಪಾತ್ರ ಮಹತ್ವದ್ದು. ಈ ಕಾಲದ ವ್ಯವಹಾರ ನೀತಿಗೆ ತಕ್ಕಂತೆ ಪರಿವರ್ತನೆಯ ಅಗತ್ಯವಿದೆ' ಎಂದು ಡಬ್ಲ್ಯುಟಿಸಿ ಸಲಹೆಗಾರ ಉಮಾರೆಡ್ಡಿ ಹೇಳಿದರು.
ಪೀಣ್ಯದಾಸರಹಳ್ಳಿ ಸಮೀಪದ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಲಾದ 'ಥಿಂಕಿಂಗ್ ಲೋಕಲ್, ಗೋಯಿಂಗ್ ಗ್ಲೋಬಲ್' ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ರೆ.ಫಾ. ಡಾ. ಸಾಬುಜಾರ್ಜರ್ ಮಾತನಾಡಿ, 'ಇಂದಿನ ಜಾಗತೀಕರಣ ಹಾಗೂ ಆಧುನಿಕತೆಯ ಪರಂಪರೆಯು ದೇಸಿಸಂಸ್ಕೃತಿಯಲ್ಲೂ ಸಂಚಲನ ಉಂಟು ಮಾಡಿದೆ. ಆರ್ಥಿಕ ಅಭಿವೃದ್ಧಿಯ ಜತೆಗೆ ತಾಂತ್ರಿಕತೆಯ ಪರಿಣಾಮ ಉದ್ಯಮಶೀಲತೆಯ ಮೇಲೆ ಹೆಚ್ಚು ಗಮನ ಸೆಳೆದಿದೆ' ಎಂದರು.
ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಬೆನ್ನಿಮ್ಯಾಥ್ಯೂ, 'ದೇಶದ ಉದ್ಯಮಶೀಲತೆ ಮತ್ತು ಡಿಜಿಟಲೀಕರಣದ ವಿಚಾರಗಳ ಬಗ್ಗೆ ಪಂಡಿತರು, ವಿದ್ವಾಂಸರು, ಸಂಶೋಧಕರು ಹಾಗೂ ಅನುಭವಿಗಳು ಚರ್ಚೆ ನಡೆಸುವುದರಿಂದ ಅದರ ಸಾಧಕ ಬಾಧಕಗಳನ್ನು ತಿಳಿಯಬಹುದು' ಎಂದರು.
ಸಂಕಿರಣದಲ್ಲಿ ವಿವಿಧ ರಾಜ್ಯ ಹಾಗೂ ವಿಶ್ವವಿದ್ಯಾಲಯಗಳ 200ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು.