ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಗಲಭೆ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು, ಗುರುವಾರ ನಗರದ 12 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದರು.
ಡಿ.ಜೆ. ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ತನಿಖೆ ಆರಂಭಿಸಿರುವ ಎನ್ಐಎ ತಂಡದಲ್ಲಿ ಐಜಿಪಿ ದರ್ಜೆಯ ಅಧಿಕಾರಿ, ಎಸ್ಪಿಗಳು, ಡಿವೈಎಸ್ಪಿಗಳು, ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿ ಇದ್ದಾರೆ.
ಮಂಗಳವಾರ ಹಾಗೂ ಬುಧವಾರ ಠಾಣೆಗೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದಿದ್ದ ಅಧಿಕಾರಿಗಳು, ಗುರುವಾರ ಬೆಳಿಗ್ಗೆಯೇ 12 ಕಡೆಗಳಲ್ಲಿ ದಾಳಿ ಮಾಡಿ ಮತ್ತಷ್ಟು ಪುರಾವೆಗಳನ್ನು ಕಲೆಹಾಕಿದ್ದಾರೆ.
ಘಟನಾ ಸ್ಥಳ, ಆರೋಪಿಗಳ ಮನೆ, ಕೆಲವರ ಕಚೇರಿ ಸೇರಿದಂತೆ ಹಲವೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದರು. ದಾಳಿ ಬಳಿಕ ಠಾಣೆಗೆ ಬಂದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಚರ್ಚಿಸಿದರು.