ಹೆಸರಘಟ್ಟ: ದಾಸನಪುರ ಹೋಬಳಿ ತೋಟಗೆರೆ ಗ್ರಾಮದಿಂದ ನೃತ್ಯ ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ರಸ್ತೆಯ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ನಾಲ್ಕು ಕಿ.ಮೀ. ರಸ್ತೆಯನ್ನು ಅಗೆದು ಜಲ್ಲಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ದ್ವಿಚಕ್ರ ವಾಹನಗಳು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಶಾಂತಣ್ಣ ಬೇಸರ ವ್ಯಕ್ತಪಡಿಸಿದರು.
‘ರಸ್ತೆಯ ಅಕ್ಕಪಕ್ಕದಲ್ಲಿ ಅನೇಕ ನರ್ಸರಿಗಳಿವೆ. ಕೋಳಿ ಸಾಕಾಣಿಕೆ ಕೇಂದ್ರಗಳೂ ಇವೆ. ರೈತರು ತರಕಾರಿಗಳನ್ನು ಮಾರುಕಟ್ಟೆಗೆ ಒಯ್ಯಲು ಇದೇ ರಸ್ತೆಯ ಮೂಲಕ ಸಾಗಬೇಕು. ಈ ಜಲ್ಲಿಯನ್ನು ದಾಟಿಯೇ ದನಕರುಗಳೂ ಮೇಯಲು ಹೋಗಬೇಕು. ಜಲ್ಲಿ ತಾಗಿ ದನಗಳ ಪಾದಕ್ಕೆ ಗಾಯಗಳಾಗುತ್ತಿವೆ’ ಎಂದರು.
‘ಗಾಯದ ನೋವಿನಿಂದ ಹಸುಗಳು ಓಡಾಡುವುದೇ ಕಷ್ಟವಾಗಿದೆ. ಪಶು ವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದರು.
‘ಗುತ್ತಿಗೆದಾರರು ಬೇಗ ಕೆಲಸ ಪೂರ್ಣಗೊಳಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯ ದಾಸನಪುರ ವಿಭಾಗದ ಎಂಜಿನಿಯರ್ ಮಂಜುನಾಥ, ‘ಶೀಘ್ರದಲ್ಲಿಯೇ ರಸ್ತೆಗೆ ಡಾಂಬರು ಹಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಎಂದರು.