ಚರ್ಚ್ಗಳಲ್ಲಿ ಆಡಳಿತ, ಪೂಜೆ ಕನ್ನಡದಲ್ಲಿರಲಿ: ಕ್ರೈಸ್ತರ ಕನ್ನಡ ಸಂಘ ಆಗ್ರಹ

ಬೆಂಗಳೂರು: ‘ಚರ್ಚ್ಗಳ ಆಡಳಿತ ಹಾಗೂ ಪೂಜಾ ವಿಧಿಗಳನ್ನು ಕನ್ನಡ ಭಾಷೆಯ ಮೂಲಕವೇ ನಡೆಸಬೇಕು’ ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘವು ಆಗ್ರಹಿಸಿದೆ.
ಈ ಬಗ್ಗೆ ಸಂಘವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರಿಗೆ ಮನವಿ ಸಲ್ಲಿಸಿದೆ. ‘ಕ್ಯಾಥೋಲಿಕ್ ಚರ್ಚ್ಗಳ ಆಡಳಿತ ಮತ್ತು ಪೂಜಾ ವಿಧಿಗಳು ಆಯಾ ಪ್ರಾದೇಶಿಕ ಭಾಷೆಗಳ ಮೂಲಕ ನಡೆಯಬೇಕಿದೆ. ಈ ಬಗ್ಗೆ 1962ರಲ್ಲಿ ನಡೆದ ವ್ಯಾಟಿಕನ್ ಸಮ್ಮೇಳನದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಆದೇಶವನ್ನು ದೇಶದ ಹೆಚ್ಚಿನ ರಾಜ್ಯಗಳು ಪರಿಪಾಲಿಸುತ್ತಾ ಬಂದಿವೆ. ಆದರೆ, ಕರ್ನಾಟಕದಲ್ಲಿ ಅನ್ಯಭಾಷಿಕ ಧರ್ಮಾಧ್ಯಕ್ಷರ ನಿರ್ಲಕ್ಷ್ಯ ಹಾಗೂ ಕುತಂತ್ರದಿಂದ ಕನ್ನಡವನ್ನು ಕಡೆಗಣಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ರಫಾಯಲ್ ರಾಜ್ ಹಾಗೂ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
‘ಬೆಂಗಳೂರಿನ ಮಹಾ ಧರ್ಮಕ್ಷೇತ್ರದ ಜತೆಗೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 14 ಧರ್ಮ ಕ್ಷೇತ್ರಗಳಿವೆ. ತಮಿಳು, ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳನ್ನು ಚರ್ಚ್ಗಳ ಪೂಜಾ ವಿಧಿಗಳಲ್ಲಿ ಹೇರಿಕೆ ಮಾಡಲಾಗಿದೆ. ಚರ್ಚ್ಗಳ ಆಡಳಿತದಲ್ಲಿ ಅನ್ಯ ಭಾಷಿಕರೇ ಹೆಚ್ಚಾಗಿ ನೇಮಕರಾಗುತ್ತಿದ್ದಾರೆ. ಕನ್ನಡಿಗರನ್ನು ಗುರುಗಳಾಗಿ ನೇಮಕ ಮಾಡಲಾಗುತ್ತಿಲ್ಲ. ಪ್ರಾದೇಶಿಕ ಗುರು ಮಠವೂ ಸ್ಥಾಪನೆಯಾಗಿಲ್ಲ. ಹಾಗಾಗಿ, ಪ್ರಾಧಿಕಾರವು ಸಂಬಂಧಪಟ್ಟ ಧರ್ಮಾಧ್ಯಕ್ಷರ ಮೇಲೆ ಒತ್ತಡ ತಂದು, ಚರ್ಚ್ಗಳಲ್ಲಿ ಕನ್ನಡ ಭಾಷೆ ಅನುಷ್ಠಾನ ಮಾಡಲು ಮುಂದಾಗಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.