ಬೆಂಗಳೂರು: ‘ನಾನು ಗಂಡಿನಂತಿದ್ದೆ. ಆರನೇ ತರಗತಿಗೆ ಬರುವ ವೇಳೆಗೆ ನನ್ನಲ್ಲಿ ಹೆಣ್ತತನದ ಲಕ್ಷಣಗಳು ಕಾಣ ಲಾರಂಭಿಸಿದವು. ತುಂಗಭದ್ರಾ ನದಿ ಯಲ್ಲಿ ಹಿರಿಯ ಜೋಗತಿಯೊಬ್ಬರು ನನ್ನ ಉಡದಾರ ಹರಿದು ಹೆಣ್ಣುಮಕ್ಕಳ ಉಡುಪು ತೊಡಿಸಿ ದೀಕ್ಷೆ ನೀಡಿದರು. ಕಣ್ಣ ಮುಂದೆಯೇ ನನ್ನ ಸ್ಥಿತಿ ಕಂಡ ನನ್ನ ತಾಯಿ ಬಿಕ್ಕಿಬಿಕ್ಕಿ ಅಳುತ್ತಿದ್ದರು’ ಎಂದು ಹಿರಿಯ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಹೀಗೆ ಗದ್ಗದಿತರಾಗಿ ಹೇಳುತ್ತಿದ್ದಾಗ ನೆರೆದವರ ಕಣ್ಣಾಲಿಗಳೂ ತುಂಬಿದವು.
ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಮಾತನಾಡಿದ ಅವರು, ‘ನನ್ನ ದೇಹದ ಲಕ್ಷಣಗಳು ಬದಲಾಗುತ್ತಿ ದ್ದುದು, ನಮ್ಮ ಮನೆಯವರಲ್ಲಿ ಅಸಹನೆಗೆ ಕಾರಣವಾಗಿತ್ತು. ಮುಜುಗರ ಸಹಿಸದೆ ನನ್ನನ್ನು ಮನೆಯಿಂದ ಹೊರ ಹಾಕಿದರು. ದೇವಸ್ಥಾನಗಳಲ್ಲಿ ಮಲಗಿದೆ. ಭಿಕ್ಷೆ ಬೇಡಿ ಬದುಕಿದೆ’ ಎಂದು ನೋವು ಹಂಚಿಕೊಂಡರು.
‘ದಿನಕಳೆದಂತೆ ಜೋಗತಿ ನೃತ್ಯ ಕಲಿತೆ. ನಾಟಕದ ಕಂಪನಿಗಳ ಬಳಿ ಹೋಗಿ ಹಳೆ ಸೀರೆ, ಕಾಲಿಗೆ ಕಟ್ಟಿ ಕೊಳ್ಳುವ ಗೆಜ್ಜೆ ಬೇಡಿ ತಂದೆ.
ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟೆ. ಕೊನೆಗೆ, ನೃತ್ಯವೇ ನನ್ನ ಕೈ ಹಿಡಿಯಿತು’ ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಮಂಜಮ್ಮ, ‘ತೃತೀಯ ಲಿಂಗಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.