ಬೆಂಗಳೂರು: ‘ಹೊಸ ಆವಿಷ್ಕಾರ ಸೇರಿದಂತೆ ಉನ್ನತ ಶಿಕ್ಷಣದ ಹಂತದಲ್ಲಿ ಕಲಿಯುವ ಶಿಕ್ಷಣವನ್ನು ಮಗುವು ನರ್ಸರಿಯಲ್ಲಿಯೇ ಕಲಿಯಬಹುದು. ಪ್ರತಿಯೊಂದು ಮಗು ವಿಭಿನ್ನ ರೀತಿಯ ಯೋಚನೆ ಹೊಂದುವುದಕ್ಕೆ ಪ್ರೇರೇಪಿಸಬಹುದು. ಆಟದೊಂದಿಗೆ ಪಾಠ ಕಲಿಯಲು ಹಾಗೂಶಿಕ್ಷಣದಲ್ಲಿ ವೈಜ್ಞಾನಿಕ ಕಲಿಕೆ ಅಳವಡಿಸಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಹಕಾರಿ’ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು.
ಕೋಣನಕುಂಟೆಯ ಸಿಲಿಕಾನ್ ಸಿಟಿ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಕ್ಕಳು ದೇಶದ ಆಸ್ತಿ. ಅವರ ಯೋಚನಾ ಲಹರಿ ದೇಶದ ಪ್ರಗತಿಗೆ ಮುನ್ನುಡಿಯಾಗಲಿದೆ’ ಎಂದರು.
ಸಿಲಿಕಾನ್ ಸಿಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಲಕ್ಷ್ಮಣ್,‘ಎನ್ಇಪಿ ಈ ಶತಮಾನದ ಮೊದಲ ಶಿಕ್ಷಣ ನೀತಿ. ಹೊಸತನ, ಅದ್ಭುತ ಜ್ಞಾನಮಾರ್ಗದ ಸಮಾಜ ನಿರ್ಮಾಣ ಹಾಗೂ ಜಾಗತಿಕ ಮಟ್ಟದಲ್ಲಿ ಸಮಾನತೆ, ಗುಣಮಟ್ಟದ ಶಿಕ್ಷಣಈ ನೀತಿಯ ಗುರಿ’ ಎಂದರು.
‘ಸೃಜನಶೀಲ, ಸಹಯೋಗ, ಕುತೂಹಲ, ಸಂವಹನ ಸೇರಿದಂತೆ ಈ ಶತಮಾನದ ಕೌಶಲಗಳ ಮೂಲಕ ವಿದ್ಯಾರ್ಥಿಗಳನ್ನು ಭಾರತದ ಭವಿಷ್ಯ ರೂಪಿಸುವುದಕ್ಕೆ ಸಿದ್ಧಗೊಳಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾನದಂಡಗಳು, ತಂತ್ರಜ್ಞಾನ-ಸಕ್ರಿಯ ಬೋಧನಾ ಕ್ಷಮತೆಯ ಮೇಲೆ ಎನ್ಇಪಿ ಹೆಚ್ಚು ಗಮನ ಹರಿಸುತ್ತದೆ’ ಎಂದರು.
ಸಿಲಿಕಾನ್ ಸಿಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಸಮೀರ ಸಿಂಹ, ಟ್ರಸ್ಟಿ ಶ್ರೀಧರ್ ಲಕ್ಷ್ಮಣ್, ಪ್ರಾಂಶುಪಾಲರಾದ ಸುಮಾಲಿನಿ.ಬಿ.ಸ್ವಾಮಿ ಮಾತನಾಡಿದರು.