ಬೊಮ್ಮನಹಳ್ಳಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರದ ಅಂಗವಾಗಿ ಸಿಐಟಿಯು ಮತ್ತು ಐಎನ್ ಟಿಯುಸಿ ಕಾರ್ಯಕರ್ತರು ಬೊಮ್ಮನಹಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮುಂದುವರಿಸಿದ ಕಾರ್ಮಿಕರು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಕಾಶ್, ‘ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ ಸಂಹಿತೀಕರಣ ಮಾಡಿರುವ ಹಿಂದೆ, ಬಂಡವಾಳದಾರರ ಹಿತ ಅಡಗಿದೆ. ಉದ್ಯೋಗದ ಅಭದ್ರತೆ ಸೃಷ್ಟಿಸಿ ಕಡಿಮೆ ಕೂಲಿಗೆ ಕಾರ್ಮಿಕರನ್ನು ದುಡಿಸಿಕೊಳ್ಳಲು ಇದು ನೆರವಾಗಲಿದೆ. ಸಂಸತ್ತನ್ನು ಕತ್ತಲಲ್ಲಿಟ್ಟು, ಸುಗ್ರೀವಾಜ್ಞೆಗಳ ಮೂಲಕ ಕಾನೂನುಗಳನ್ನು ಮಾಡುತ್ತಿದ್ದು, ಇದು ಹಿಟ್ಲರ್ ಮಾದರಿ ಅಚ್ಛೆ ದಿನ್ ಆಗಿದೆ’ ಎಂದು ಹೇಳಿದರು.
ಐಎನ್ ಟಿಯುಸಿ ಮುಖಂಡ ಶಾಮಣ್ಣರೆಡ್ಡಿ, ಸಿಐಟಿಯು ಮುಖಂಡ ಜಾವೀದ್ ಅಹಮ್ಮದ್, ಗಾರ್ಮೆಂಟ್ಸ್ ಕಾರ್ಮಿಕರ ಸಂಘದ ಮುಖಂಡ ಬಸವರಾಜು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.