ಬೆಂಗಳೂರು: ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರನ್ನು ಸಂಚಾರ ಪೊಲೀಸರು ಮಾತ್ರವಲ್ಲ ಸಾರಿಗೆ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ಅಡ್ಡಗಟ್ಟಲಿದ್ದಾರೆ.
ಹೆಲ್ಮೆಟ್ ಧರಿಸದ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ಮೂರು ತಿಂಗಳು ಅಮಾನತು ಮಾಡುವ ಸರ್ಕಾರದ ಅದೇಶ ಹೊರಬಿದ್ದ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ.
ಫೋರಂ ಮಾಲ್, ಸುಮನಹಳ್ಳಿ ಜಂಕ್ಷನ್, ಟಿನ್ ಫ್ಯಾಕ್ಟರಿ ಸಮೀಪ, ಗೊರಗುಂಟೆಪಾಳ್ಯ, ಕನಕಪುರ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಭಟ್ಟರಹಳ್ಳಿ, ಚಂದಾಪುರ ಸರ್ಕಲ್, ದೇವನಹಳ್ಳಿ ಸೇರಿ 11 ಪ್ರಮುಖ ಜಂಕ್ಷನ್ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.
‘ವಾಹನಗಳನ್ನು ತಡೆದು ಸಪಾಸಣೆ ಮಾಡಲು ಸಾರಿಗೆ ಇಲಾಖೆಗೆ ಹಿಂದಿನಿಂದಲೂ ಅಧಿಕಾರ ಇದೆ. ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಸದ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ’ ಎಂದು ಸಾರಿಗೆ ಇಲಾಖೆಯ ನಗರ ವಿಭಾಗದ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ತಿಳಿಸಿದರು.