ಬೆಂಗಳೂರು: ‘ಮತಾಂತರ ದ್ವೇಷಿಸುವ ಈ ಕಾಲದಲ್ಲಿ ಶ್ಯಾಮಲಾ ಮಾಧವ ಅವರು ಕಟ್ಟಿಕೊಟ್ಟಿರುವ ಬದುಕು, ಸಾಮರಸ್ಯದ ಮಹತ್ವವನ್ನು ಸಾರುತ್ತದೆ. ಸಾಮರಸ್ಯ ಜೀವನದ ಭಾಗವಾಗಿದೆ’ ಎಂದು ಖ್ಯಾತ ವಿದ್ವಾಂಸ ಪ್ರೊ ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.
‘ಅವಧಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸಾಹಿತಿ ಶ್ಯಾಮಲಾ ಮಾಧವ ಅವರ ಅನುಭವ ಕಥನ ‘ನಾಳೆ ಇನ್ನೂ ಕಾದಿದೆ’ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಆತ್ಮ ಕಥನ, ಆತ್ಮ ಚರಿತ್ರೆ, ಅನುಭವ ಕಥನ ಇಂದು ಹೊಸ ದಿಕ್ಕನ್ನು ಕಂಡುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೇಖಕಿಯರು ಆತ್ಮ ಕಥನ ರಚಿಸಿದ್ದಾರೆ. ಪುರುಷ ಸಾಹಿತಿಗಳು ಬರೆದ ಕಥನಕ್ಕೂ, ಲೇಖಕಿಯರು ಬರೆದ ಕಥನಕ್ಕೂ ಇರುವ ವ್ಯತ್ಯಾಸವನ್ನು ಅಧ್ಯಯನ ಮಾಡುವುದು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟರು.
‘ಈ ಹೊತ್ತಿಗೆ’ಯ ಜಯಲಕ್ಷ್ಮಿ ಪಾಟೀಲ ಮಾತನಾಡಿ, ‘ಇದು ಅಪ್ಪಟ ಹೆಣ್ಣಿನ ಕೃತಿ ಎಂದು ಬಣ್ಣಿಸಿದರು. ಶ್ಯಾಮಲಾ ಮಾಧವ ಅವರು ಬದುಕನ್ನು ಕಟ್ಟಿಕೊಂಡ ಬಗೆ ಮಾದರಿಯಾಗಿದೆ. ಎಲ್ಲಾ ಹೆಣ್ಣುಮಕ್ಕಳ ಪ್ರಯಾಣದಂತಿದೆ’ ಎಂದು ಬಣ್ಣಿಸಿದರು.
ರಂಗಕರ್ಮಿ ನಾ. ದಾಮೋದರ ಶೆಟ್ಟಿ ಮಾತನಾಡಿ, ‘ಶ್ಯಾಮಲಾ ಮಾಧವ ಅವರ ಕೃತಿಯ ಹೆಸರೇ ಆಶಾಭಾವ, ಆತಂಕ ಎರಡನ್ನೂ ಬಿಂಬಿಸುವಂತಿದೆ’ ಎಂದರು.