ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ ಉತ್ಸವಕ್ಕೆ ಬಸವಕಲ್ಯಾಣ ಸಜ್ಜು

Published 25 ನವೆಂಬರ್ 2023, 4:59 IST
Last Updated 25 ನವೆಂಬರ್ 2023, 4:59 IST
ಅಕ್ಷರ ಗಾತ್ರ

ಬಸವಕಲ್ಯಾಣ: ಶರಣ ಭೂಮಿ ಬಸವಕಲ್ಯಾಣ ಅನುಭವ ಮಂಟಪ ಉತ್ಸವಕ್ಕೆ ಸಜ್ಜುಗೊಂಡಿದೆ.

ವಿಶ್ವ ಬಸವಧರ್ಮ ಟ್ರಸ್ಟ್‌ನಿಂದ ಸತತ 43 ವರ್ಷಗಳಿಂದ ಇಲ್ಲಿನ ಅನುಭವ ಮಂಟಪದ ಪ್ರಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು, 44ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಕೂಡ ಅದ್ದೂರಿಯಿಂದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಶನಿವಾರ, ಭಾನುವಾರ (ನ.25,26) ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣದಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಬೆಳಗಾವಿ, ವಿಜಯಪುರ, ಧಾರವಾಡ, ಉಳವಿ, ಕಲಬುರಗಿ, ನೆರೆಯ ಹೈದರಾಬಾದ್‌, ಸೊಲ್ಲಾಪುರ, ಅಕ್ಕಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಿಂದ ಬಸವ ಭಕ್ತರು ಕಲ್ಯಾಣಕ್ಕೆ ಆಗಮಿಸಿದ್ದಾರೆ.

ಭಕ್ತರ ವಾಸ್ತವ್ಯಕ್ಕೆ ಪಟ್ಟಣದಲ್ಲಿ ಹಲವು ಕಲ್ಯಾಣ ಮಂಟಪ, ಯಾತ್ರಿ ನಿವಾಸ ಹಾಗೂ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಗಣ್ಯರಿಗಾಗಿ ಕಲಬುರಗಿ ಮತ್ತು ಹೈದರಾಬಾದ್‌ನಲ್ಲಿ ಹೋಟೆಲ್‌ಗಳನ್ನು ಬುಕ್‌ ಮಾಡಲಾಗಿದ್ದು, ಶನಿವಾರ ಬೆಳಿಗ್ಗೆ ಕಾರ್ಯಕ್ರಮದ ಸ್ಥಳಕ್ಕೆ ಬರಲಿದ್ದಾರೆ. ಇನ್ನು, ಅನುಭವ ಮಂಟಪದ ಪರಿಸರದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದೊಂದಿಗೆ ಹೆಚ್ಚುವರಿಯಾಗಿ ಶಾಮಿಯಾನ ಹಾಕಿಸಿ, ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಗಲು–ರಾತ್ರಿ ನಿರಂತರವಾಗಿ ದಾಸೋಹ ನಡೆಯಲಿದೆ. ಬೆಳಿಗ್ಗೆ ಉಪಾಹಾರ, ಅನಂತರ ಮಧ್ಯಾಹ್ನದಿಂದ ತಡರಾತ್ರಿ ವರೆಗೆ ಪ್ರಸಾದದ ವ್ಯವಸ್ಥೆ ಇರಲಿದೆ. ಕಲ್ಯಾಣದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ಪ್ರಸಾದದ ಜವಾಬ್ದಾರಿ ಹೊತ್ತುಕೊಂಡಿವೆ. ಪ್ರಸಾದಕ್ಕೆ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವಕ್ಕೆ ಒತ್ತು ಕೊಡಲಾಗಿದೆ. ಹಡಪದ ಲಿಂಗಮ್ಮ ಪ್ರಸಾದ ಮಂಟಪ ಎಂದು ಹೆಸರಿಡಲಾಗಿದೆ.


ವೇದಿಕೆಗೆ ಸಿದ್ದೇಶ್ವರ ಸ್ವಾಮೀಜಿ ಹೆಸರು

ಕಾರ್ಯಕ್ರಮ ನಡೆಯಲಿರುವ ಪ್ರಧಾನ ವೇದಿಕೆಗೆ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಎಂದು ಹೆಸರಿಡಲಾಗಿದೆ. ಮಹಾದ್ವಾರಕ್ಕೆ ಹೂಗಾರ ಮಾದಣ್ಣ ಎಂದು ಹೆಸರಿಸಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಸ್ಟಾಲ್‌ಗಳನ್ನು ತೆರೆಯಲಾಗಿದ್ದು, ಶಿವಶರಣರ ತತ್ವ, ವಚನಗಳ ಪುಸ್ತಕ, ಲಿಂಗ, ವಿಭೂತಿಯನ್ನು ಮಾರಾಟಕ್ಕೆ ಇಡಲಾಗಿದೆ. ಹೈದರಾಬಾದ್‌–ಮುಂಬೈ ರಾಷ್ಟ್ರೀಯ ಹೆದ್ದಾರಿಯಿಂದ ಬಸವಕಲ್ಯಾಣದ ಮುಖ್ಯರಸ್ತೆ, ಪಟ್ಟಣ ಹಾಗೂ ಅನುಭವ ಮಂಟಪಕ್ಕೆ ಹೋಗುವ ಮಾರ್ಗದಲ್ಲಿ ಸ್ವಾಗತ ಕೋರುವ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇದರಿಂದಾಗಿ ಅನುಭವ ಮಂಟಪದ ಪರಿಸರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮದುವೆ ಮನೆಯಂತಾಗಿದೆ.

ಚನ್ನಬಸವ ಪಟ್ಟದ್ದೇವರು, ಎಂ.ಎಂ. ಕಲಬುರಗಿ ಪ್ರಶಸ್ತಿ

ಇನ್ನು ಶನಿವಾರ ನಡೆಯಲಿರುವ ಮೊದಲ ದಿನದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರಿಗೆ ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಹಾಗೂ ಬಿ.ವಿ. ಶಿರೂರ ಅವರಿಗೆ ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಭಾನುವಾರದ ಸಮಾರಂಭದಲ್ಲಿ ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲು ಉತ್ಸವ ಸಮಿತಿ ನಿರ್ಧರಿಸಿದೆ.

ಸ್ವತಂತ್ರ ಲಿಂಗಾಯತ ಧರ್ಮದ ಚರ್ಚೆ

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಎರಡು ವಿಷಯಗಳ ಮೇಲೆ ಗೋಷ್ಠಿಗಳು ಜರುಗಲಿವೆ. ‘ಲಿಂಗಾಯತ ಸ್ವತಂತ್ರ ಧರ್ಮ; ಸಮಸ್ಯೆ–ಸವಾಲು ಮತ್ತು ಪರಿಹಾರಗಳು’ ಕುರಿತು ಚಿಂತಕ ಜಿ.ಎಸ್‌. ಪಾಟೀಲ ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಸಿಂಧನೂರಿನ ವೀರಭದ್ರಪ್ಪ ಮರಕುಂದಾ ವಿಷಯ ಮಂಡಿಸುವರು. ‘ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿ’ ಕುರಿತು ಸಾಹಿತಿ ಶಿವಗಂಗಾ ರುಮ್ಮಾ ಮಾತನಾಡುವರು.

ಪ್ರಮುಖ ಸ್ವಾಮೀಜಿಗಳು ಭಾಗಿ

ಈ ಸಲದ ಅನುಭವ ಮಂಟಪ ಉತ್ಸವದಲ್ಲಿ ನಾಡಿನ ಪ್ರಮುಖ ಸ್ವಾಮೀಜಿಗಳೆಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ವಿಜಯಪುರದ ಬಸವಲಿಂಗ ಸ್ವಾಮೀಜಿ ಚರಂತೇಶ್ವರ ವಿರಕ್ತಮಠದ ಶರಣಬಸವ ಸ್ವಾಮೀಜಿ ಬಸವಕಲ್ಯಾಣ ಅನುಭವ ಮಂಟಪದ ಬಸವಲಿಂಗ ಪಟ್ಟದ್ದೇವರು ಭಾಲ್ಕಿ ಹಿರೇಮಠದ ಗುರುಬಸವ ಸ್ವಾಮೀಜಿ ರಾಮನಗರದ ಪ್ರಭುಕಿರೀಟ ಸ್ವಾಮೀಜಿ ಭಾಗವಹಿಸುವರು.

ಮೊದಲ ದಿನದ ಕಾರ್ಯಕ್ರಮಗಳೇನು?

ಶನಿವಾರ (ನ. 25ರಂದು) ಬೆಳಿಗ್ಗೆ 9.30ಕ್ಕೆ ಬಸವೇಶ್ವರರ ಪೂಜೆ ವಚನ ಪಠಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಚಾಲನೆ ನೀಡುವರು. ಜರುಗಲಿದೆ. ಬೆಳಿಗ್ಗೆ 9.40ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣ ನೆರವೇರಿಸುವರು. ಶರಣ ಹೂಗಾರ ಮಾದಣ್ಣ ಮಹಾದ್ವಾರವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಶರಣೆ ಹಡಪದ ಲಿಂಗಪ್ಪ ಪ್ರಸಾದ ಮಂಟಪವನ್ನು ಅಮೆರಿಕದ ಸಂಗೀತಾ ಸುಜೀತ ಪಾಟೀಲ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೇದಿಕೆಯನ್ನು ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್‌ ಉದ್ಘಾಟಿಸುವರು. ಬೆಳಿಗ್ಗೆ 11ಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಎರಡು ದಿನಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡುವರು.

ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಸ್ಟಾಲ್‌ಗಳಿಗೆ ಶುಕ್ರವಾರ ಸಂಜೆ ಅಂತಿಮ ಸಿದ್ಧತೆ ಮಾಡಲಾಯಿತು
ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಸ್ಟಾಲ್‌ಗಳಿಗೆ ಶುಕ್ರವಾರ ಸಂಜೆ ಅಂತಿಮ ಸಿದ್ಧತೆ ಮಾಡಲಾಯಿತು
ಭಕ್ತರಿಗಾಗಿ ಪ್ರಸಾದ ವ್ಯವಸ್ಥೆಗೆ ಅಂತಿಮ ಸಿದ್ಧತೆ ನಡೆಯಿತು
ಭಕ್ತರಿಗಾಗಿ ಪ್ರಸಾದ ವ್ಯವಸ್ಥೆಗೆ ಅಂತಿಮ ಸಿದ್ಧತೆ ನಡೆಯಿತು
ಭಕ್ತರ ಪ್ರಸಾದಕ್ಕೆ ಕೌಂಟರ್‌ ಮಾದರಿಯಲ್ಲಿ ವ್ಯವಸ್ಥೆ ಮಾಡಿರುವುದು
ಭಕ್ತರ ಪ್ರಸಾದಕ್ಕೆ ಕೌಂಟರ್‌ ಮಾದರಿಯಲ್ಲಿ ವ್ಯವಸ್ಥೆ ಮಾಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT