ಚಿಟಗುಪ್ಪ: ‘ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದರಿಂದ ಸಮಾಜ ಸುಧಾರಣೆಯಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸುರೇಖಾ ತಿಳಿಸಿದರು.
ತಾಲ್ಲೂಕಿನ ನಿರ್ಣಾದ ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ನಾಗಯ್ಯ ಸ್ವಾಮಿ ಅವರ 27ನೇ ಸ್ಮರಣೋತ್ಸವ ಹಾಗೂ ಅಪೆಕ್ಸ್ ನಂದಿನಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಯೆ, ಕರುಣೆ, ಶ್ರದ್ಧೆ, ಪ್ರಾಮಾಣಿಕತೆ, ಸರಳ ಜೀವನ ಈ ಎಲ್ಲವೂ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ವೈಯಕ್ತಿಕ ಪ್ರಗತಿ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ನಂದಿನಿ ವಿದ್ಯಾಲಯದ ಶ್ರಮದಾಯಕವಾದ ಗುಣಾತ್ಮಕ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಭಾಲ್ಕಿ ಪೊಲೀಸ್ ವೃತ್ತ ನಿರೀಕ್ಷಕ ಗುರಣ್ಣ ಎಸ್.ಹೆಬ್ಬಾಳ ಮಾತನಾಡಿ,‘ಮಕ್ಕಳ ಸುರಕ್ಷತೆಗೆ ನಂದಿನಿ ವಿದ್ಯಾಲಯದ ಒಳಾಂಗಣ ವ್ಯವಸ್ಥೆ ಅತ್ಯಂತ ಪೂರಕವಾಗಿದೆ’ ಎಂದರು.
ಬಿಎಸ್ಎಸ್ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ, ನಿವೃತ್ತ ಪ್ರಾಚಾರ್ಯ ಎಂ.ಎಂ.ಮಾಸೂಲ್ದಾರ್, ನೀಲಕಂಠ ಇಸ್ಲಾಮಪುರ್, ವಿಠಲರಾವ್ ಪಠಣಕರ್ ಹಾಗೂ ಅಸ್ಲಾಮ ಮಿಯ್ಯ ಮಾತನಾಡಿದರು.
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕಿ ಸುರೇಖಾ ಹಾಗೂ ಸಿಪಿಐ ಜಿ.ಎಸ್.ಹೆಬ್ಬಾಳ ಅವರಿಗೆ ‘ನಾಗಯ್ಯ ಸ್ವಾಮಿ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ದೇಶ ಭಕ್ತಿ, ಭಾವೈಕ್ಯ, ಧಾರ್ಮಿಕತೆಯ ಮಹತ್ವ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಕುಂತಲಾ ಬೆಲ್ದಾಳೆ, ಪತ್ರಕರ್ತ ಸಂಜೀವಕುಮಾರ ಬುಕ್ಕಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ರೆಡ್ಡಿ ಏಖ್ಖೇಳಿ, ವಿಜಯರಡ್ಡಿ ಲಚ್ಚನಗಾರ್, ಶ್ರೀನಿವಾಸ ಪತ್ತಾರ, ಘಾಳಯ್ಯ ಸ್ವಾಮಿ, ಅನಿಲರಡ್ಡಿ ಲಚ್ಚನಗಾರ್, ರಸೂಲಸಾಬ್, ಮಸ್ತಾನ ನೂರೋದ್ದಿನ್ ಹಾಗೂ ಬಸವಣಪ್ಪ ಚಿಟ್ಟಾ ಇದ್ದರು.
ಶಂಕರರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾತೆ ಸಂಗಮ್ಮ ಮಠಪತಿ ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ಧ ಕುಂಬಾರ ನಿರೂಪಿಸಿದರು. ಗುರುಸ್ವಾಮಿ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಉಮಾಶ್ರೀ ಹಿರಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.