ಕೊರೊನಾ ‘ಬಿಸಿ’ಗೆ ಬಾಡಿದ ಹೂವು: ವಿಶೇಷ ಪ್ಯಾಕೇಜ್ಗೆ ಒತ್ತಾಯ

ಚಿಟಗುಪ್ಪ: ಕೋವಿಡ್ ಪರಿಣಾಮ ಚಿಟಗುಪ್ಪ ಪಟ್ಟಣ ಸೇರಿ ತಾಲ್ಲೂಕಿನ ತಾಳಮಡಗಿ, ನಿರ್ಣಾ, ನಿರ್ಣಾ ವಾಡಿ, ವಳಖಿಂಡಿ, ಇಟಗಾ, ಕುಡಂಬಲ್ ಹಾಗೂ ಮಂಗಲಗಿ ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಹೂವು ಬೆಳೆದಿದ್ದಾರೆ. ಮಾರುಕಟ್ಟೆ ಇಲ್ಲದ್ದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ.
ಹೂವಿನ ವ್ಯಾಪಾರವೂ ಸರಿಯಾಗಿ ನಡೆಯುತ್ತಿಲ್ಲ. ಕಾರಣ ಹೂವು ಮಾರುವವರು ಆತಂಕಕ್ಕೀಡಾಗಿದ್ದಾರೆ.
ಕೋವಿಡ್ ಸೋಂಕಿನ ಕಾರಣ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಸಭೆ,ಸಮಾರಂಭಗಳೂ ನಡೆಯುತ್ತಿಲ್ಲ. ಇದರಿಂದ ಮಾಲೆಗಳು ಮಾರಾಟ ಆಗುತ್ತಿಲ್ಲ.
‘ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಕುಸಿದಿದೆ. ಚೆಂಡು ಹೂವಿನ ಬೆಳೆ ಹೊಲದಲ್ಲಿಯೇ ಹಾಳಾಗುತ್ತಿದೆ. ಕೃಷಿ ಕಾರ್ಮಿಕರಿಗೆ ಹಣ ಕೊಟ್ಟು ಹೂವು ತೆಗೆಸಬೇಕು. ಇದರಿಂದ ನಷ್ಟವಾಗುತ್ತಿದೆ’ ಎಂದು ರೈತ ಗುರಪ್ಪ ಅಳಲು ತೋಡಿಕೊಂಡರು.
‘ದಿನಪೂರ್ತಿ ರಸ್ತೆ ಬದಿ ಕುಳಿತರೆ 10-12 ಹಾರಗಳು ಮಾರಾಟವಾಗುತ್ತವೆ. ಇದರಿಂದ ₹200, ₹300 ಸಿಗುತ್ತದೆ. ಈ ಹಣದಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ರೈತರಿಂದ ಖರೀದಿಸಿದ ಹೂವು ಮಾರಾಟವಾಗದೇ ಬಾಡುತ್ತಿದೆ. ರಾತ್ರಿ ಬಿಸಾಡುವ ಪರಿಸ್ಥಿತಿ ಬಂದಿದೆ’ ಎಂದು ಹೂವು ವರ್ತಕ ಶಂಕರ್ ನುಡಿಯುತ್ತಾರೆ.
‘4-5 ತಿಂಗಳಿನಿಂದ ಕೊರೊನಾ ಭೀತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರಿಗೆ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ರೈತ ಮುಖಂಡ ನಾರಾಯಣರಾವ್ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.