ಬೀದರ್: ಜಿಲ್ಲೆಯ ಅನುದಾನ ರಹಿತ ಶಾಲೆಗಳಿಗೆ 2019-20ನೇ ಸಾಲಿನ ಆರ್.ಟಿ.ಇ ಹಣ ಬಿಡುಗಡೆ ಮಾಡಬೇಕು ಎಂದು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯ ಸಂಘ ಒತ್ತಾಯಿಸಿದೆ.
ಕೋವಿಡ್ ಸೋಂಕಿನಿಂದಾಗಿ ದೇಶವೇ ಸಂಕಷ್ಟ ಎದುರಿಸುತ್ತಿದೆ. ಆರು ತಿಂಗಳಿಂದ ಶಾಲೆಗಳೂ ಮುಚ್ಚಿವೆ. ಕಳೆದ ಹಣಕಾಸು ವರ್ಷದ ಬೋಧನಾ ಶುಲ್ಕವೂ ವಸೂಲಿ ಆಗಿಲ್ಲ. ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ವಸೂಲಿ ಮಾಡದಂತೆ ಶಿಕ್ಷಣ ಇಲಾಖೆ ಪ್ರಕಟಣೆ ನೀಡಿದ್ದರಿಂದ ಪಾಲಕರು ಶುಲ್ಕ ಪಾವತಿಸಿಲ್ಲ ಎಂದು ಹೇಳಿದೆ.
ಇದೀಗ ಸೆಪ್ಟೆಂಬರ್ ಬಂದರೂ ಶಾಲೆಗಳು ಆರಂಭವಾಗಿಲ್ಲ. ಕೆಲ ಜಿಲ್ಲೆಗಳಲ್ಲಿ 2019-20ನೇ ಸಾಲಿನ ಆರ್.ಟಿ.ಇ ಹಣ ಈಗಾಗಲೇ ಸಂದಾಯವಾಗಿದೆ. ಆದರೆ ಬೀದರ್ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ ಎಂದು ತಿಳಿಸಿದೆ.
2019-20ನೇ ಸಾಲಿನ ಆರ್.ಟಿ.ಇ ಅನುದಾನವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯ ಸಂಘದ ಗೌರವ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಹಾಗೂ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅವರು ಜಂಟಿಯಾಗಿ ಡಿಡಿಪಿಐ ಚಂದ್ರಶೇಖರ ಅವರಿಗೆ ಮನವಿಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಗುರುನಾಥ ರೆಡ್ಡಿ ಚಿಂತಾಕಿ, ಖಜಾಂಚಿ ರಾಜೇಂದ್ರ ಮಣಗೀರೆ, ಚಿಕ್ಕಬಸೆ ಕಾಮಶೆಟ್ಟಿ, ಸುರೇಶ ಪಾಟೀಲ, ಬಸವರಾಜ ಶೆಟಕಾರ, ಸಂದೀಪ ಶೆಟಕಾರ, ಗಣಪತಿ ಸೋಲಪೂರ, ಸಲೀಂ ಪಾಶಾ, ಚಂದ್ರಕಾಂತ ಪಾಟೀಲ ಇದ್ದರು.