ಬೀದರ್: ಶಿವನಿಗೆ ಅತಿ ಪ್ರೀತಿಯ ಏಕ ಬಿಲ್ವಾರ್ಚನೆ ಮಾಡುವುದರಿಂದ ಮನುಷ್ಯನ ಮೂರು ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ನುಡಿದರು.
ನೌಬಾದ್ನ ಮಲ್ಲಿಕಾರ್ಜುನ ಸ್ವಾಮಿ ಮಂದಿರದಲ್ಲಿ 111 ದಂಪತಿಗಳಿಂದ ನಡೆದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮೂರು ದಳದ ಬಿಲ್ವಾರ್ಚನೆಯಿಂದ ನಮ್ಮಲ್ಲಿನ ರಜೊಗುಣ, ತಮೊಗುಣ ಹೋಗಿ ಸತ್ವಗುಣ ಬರುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳು ಕಳೆದು ಸಾಕಾರ ಗುಣಗಳು ಜಾಗೃತವಾಗುತ್ತವೆ ಎಂದು ತಿಳಿಸಿದರು.
ಜಗತ್ತಿನ ತ್ರೈಲೋಕ ಅಧಿಪತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರು ಆಯುಧಗಳ ಶಕ್ತಿ ಒಂದು ಬಿಲ್ವದಲ್ಲಿದೆ. ಶ್ರಾವಣ ಮಾಸದಲ್ಲಿ ಲಕ್ಷ ಬಿಲ್ವಾರ್ಚನೆ ಮಾಡಿದರೆ ನೂರು ಜನ್ಮಗಳ ಉದ್ಧಾರವಾಗುತ್ತದೆ ಎಂದು ಹೇಳಿದರು.
ಶ್ರಾವಣ ಮಾಸದಾದ್ಯಂತ ಪರಮಾತ್ಮನ ಆರಾಧನೆ, ಭಜನೆ, ಕೀರ್ತನೆ, ಪೂಜೆ, ಧ್ಯಾನ, ಜಪ-ತಪಗಳನ್ನು ಮಾಡುವುದರಿಂದ ಮನುಷ್ಯನಲ್ಲಿ ಅದ್ಭುತ ಶಕ್ತಿ ಜಾಗೃತವಾಗುತ್ತದೆ. ಶಕ್ತಿಯುತವಾಗಿ ಬದುಕಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ನೌಬಾದ್ನ ಬಸವೇಶ್ವರ ವೃತ್ತದಿಂದ ಮಲ್ಲಿಕಾರ್ಜುನ ಮಂದಿರದ ವರೆಗೆ ರಾಜಶೇಖರ ಶಿವಾಚಾರ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಇದೇ ವೇಳೆ ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಯಜ್ಞ, ಪ್ರವಚನ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮ ಜರುಗಿತು.