ಜನವಾಡ: ನಿಖರ ತಂತ್ರಜ್ಞಾನ ಬಳಕೆಯಿಂದ ಕೃಷಿ ಲಾಭದಾಯಕ ಆಗಿಸಿಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಹೇಳಿದರು.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಮುಂಗಾರು ಹಂಗಾಮು ಪೂರ್ವ ಸಿದ್ಧತೆ ಹಾಗೂ ಶುಂಠಿ ಬೆಳೆ ಬೇಸಾಯ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಖರ ತಂತ್ರಜ್ಞಾನವು ಬೆಳೆ ಉತ್ಪಾದನೆ ಖರ್ಚು ತಗ್ಗಿಸುತ್ತದೆ. ಇಳುವರಿಯನ್ನೂ ಹೆಚ್ಚಿಸುತ್ತದೆ. ರೈತರು ಬೆಳೆವಾರು ಮೊದಲೇ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಡಾ. ಬಸವರಾಜ ಅವರು ಮುಂಗಾರು ಹಂಗಾಮಿನ ಮಳೆ ಹಾಗೂ ಹವಾಮಾನ ಮಾಹಿತಿ ನೀಡಿದರು.
ರೈತರಿಗೆ ಮಣ್ಣು ಮಾದರಿ ಪರೀಕ್ಷೆ ಹಾಗೂ ಫಲಿತಾಂಶ ಆಧಾರದಲ್ಲಿ ಬೆಳೆಗಳಿಗೆ ನೀಡುವ ಪೋಷಕಾಂಶಗಳು, ಸಸ್ಯ ಸಂರಕ್ಷಣೆ, ತಳಿಗಳ ಆಯ್ಕೆ, ಬೀಜೋಪಚಾರ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಲ್ಲಿ ಜೈವಿಕ ಶಿಲಿಂದ್ರ ನಾಶಕಗಳಾದ ಟ್ರೈಕೋಡರ್ಮಾ, ಸುಡೊಮೋನಾಸ್ ಬಳಕೆ, ಶುಂಠಿ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ತಾಂತ್ರಿಕ ಅಧಿಕಾರಿ ಧನರಾಜ ವಿ.ಎಸ್, ಡಾ. ಜ್ಞಾನದೇವ ಬುಳ್ಳಾ, ಮಲ್ಲಿಕಾರ್ಜುನ ನಿಂಗದಳ್ಳಿ, ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕ ನೀಲಾಂಜನ ಇದ್ದರು.