ಯಳಂದೂರು: ತಾಲ್ಲೂಕಿನ ಯರಿಯೂರು ಸಮೀಪ ಸೋಮವಾರ ರಾತ್ರಿ ಆಮ್ನಿ ವಾಹನದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಸುಮಾರು 1,350 ಕೆ.ಜಿ ಅಕ್ಕಿಯನ್ನು ಆಹಾರ ನಿರೀಕ್ಷಕರು ಮತ್ತು ಪೊಲೀಸರ ತಂಡ ವಶಪಡಿಸಿಕೊಂಡಿದೆ.
ಚಾಮರಾಜನಗರ- ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಳಂದೂರು ಪಟ್ಟಣದ ಮೂಲಕ ಕೊಳ್ಳೆಗಾಲದ ಕಡೆ ಅಕ್ಕಿಯನ್ನು ಸಾಗಣೆ ಮಾಡುತ್ತಿರುವ ಬಗ್ಗೆ ಆಹಾರ ನಿರೀಕ್ಷಕ ಆರ್. ಬಿಸಲಯ್ಯ ಅವರಿಗೆ ಮಾಹಿತಿ ದೊರೆತಿದೆ. ಆಗ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಆರ್.ಬಿ. ಉಮೇಶ್ ಮತ್ತು ತಂಡ ಪಟ್ಟಣದ ಹೊರ ವಲಯದಲ್ಲಿ ಅಕ್ಕಿ ಸಾಗಣೆ ಮಾಡುತ್ತಿದ್ದ ವಾಹನಕ್ಕಾಗಿ ಕಾದಿದ್ದಾರೆ. ಪೊಲೀಸರು ದಾಳಿ ಮಾಡುವುದನ್ನು ದೂರಿಂದಲೇ ನೋಡಿದ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ.
ವಾಹನದಲ್ಲಿ 22 ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಟ್ಟಣ ಠಾಣೆಯ ಪರಶಿವಮೂರ್ತಿ ಅವರು ಮಾಹಿತಿ ನೀಡಿದರು.
ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕು ಕಚೇರಿಯ ಆಹಾರ ನಿರೀಕ್ಷಕ ಆರ್. ಬಿಸಲಯ್ಯ, ಪ್ರಭಾರ ಪಿಎಸ್ಐ ಆರ್.ಬಿ. ಉಮೇಶ್, ಪೊಲೀಸ್ ಸಿಬ್ಬಂದಿ ಆರ್. ಮುರಳೀಧರ್, ಪರಶಿವಮೂರ್ತಿ, ಮಹೇಶ್, ಅನ್ವರ್ ಪಾಷಾ, ಅಸ್ಲಾಂ ಪಾಷಾ ಮತ್ತು ರಮೇಶ್ ದಾಳಿಯಲ್ಲಿ ಭಾಗವಹಿಸಿದ್ದರು.