ನಿಲ್ಲಿಸಿ ಎನ್ನುವ ಅಧಿಕಾರ ಯಾರಿಗೂ ಇಲ್ಲ ಚಾಮರಾಜನಗರ ದಸರಾ ನಮ್ಮೂರ ದೊಡ್ಡ ಹಬ್ಬವಿದ್ದಂತೆ. ಉತ್ಸವ ನಿಲ್ಲಿಸಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಭಾವನಾತ್ಮಕ ವಿಚಾರಗಳಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಉತ್ಸವ ನಿಲ್ಲಿಸುವ ಮಾತಿನ ಬದಲಾಗಿ ಅದ್ಧೂರಿಯಾಗಿ ನಡೆಸುವ ನಿರ್ಧಾರ ಮಾಡಬೇಕು. ಜಿಲ್ಲೆಯ ಜನರು ಸರ್ಕಾರದ ಮೇಲಿಟ್ಟಿರುವ ಪ್ರೀತಿಗೆ ಗೌರವ ಕೊಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದು.ದೊಡ್ಡಗವಿ ಬಸಪ್ಪ ಜನಪದ ಕಲಾವಿದ
ಅಸ್ಮಿತೆಗೆ ಧಕ್ಕೆ ತರಬಾರದು ಮಹದೇಶ್ವರ ಮಂಟೇಸ್ವಾಮಿ ನಡೆದಾಡಿದ ಪವಿತ್ರ ನೆಲದ ಅಸ್ಮಿತೆಗೆ ಧಕ್ಕೆ ತರಬಾರದು. ಡಾ. ರಾಜಕುಮಾರ್ ಪುನೀತ್ ರಾಜಕುಮಾರ್ ಅವರಂತಹ ನಟರ ಕರ್ಮಭೂಮಿಯ ಸಾಂಸ್ಕೃತಿಕ ಹಿರಿಮೆ ಎತ್ತಿ ಹಿಡಿಯಬೇಕು. ಚಾಮರಾಜನಗರ ದಸರಾ ನಿಲ್ಲಿಸಿದರೆ ಸಿದ್ದರಾಮಯ್ಯ ಅವರ ಸಾಂಸ್ಕೃತಿಕ ಬದ್ಧತೆಗೆ ಕಪ್ಪು ಚುಕ್ಕೆ ಆಗಬಹುದು.ಮಹಾದೇವ ಶಂಕನಪುರ ಸಂಸ್ಕೃತಿ ಚಿಂತಕ
ಜನಪ್ರತಿನಿಧಿಗಳಿಗೆ ಘೇರಾವ್ ಜಿಲ್ಲೆಯಲ್ಲಿ ಅದ್ದೂರಿಯಾಗಿ ದಸರಾ ಆಯೋಜಿಸದಿದ್ದರೆ ಚಾಮರಾಜನಗರಕ್ಕೆ ಬರುವ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಬೇಕಾಗುತ್ತದೆ. ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೈತಿಕತೆ ಇದ್ದರೆ ಸ್ಥಳೀಯ ಕಲಾವಿದರಿಗೆ ಅನ್ಯಾಯವಾಗದಂತೆ ದಸರಾ ಆಯೋಜಿಸಬೇಕು.ರಾಮಸಮುದ್ರ ಸುರೇಶ್ ಜಿಲ್ಲಾ ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ
ಜಿಲ್ಲೆಗೆ ಸಲ್ಲುವ ಗೌರವ ಜಿಲ್ಲೆಯಲ್ಲಿ ದಸರಾ ನಡೆಯುವುದು ಜಿಲ್ಲೆಯ ಪಾಲಿಗೆ ಸಲ್ಲುವ ಗೌರವವಿದ್ದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನರಿತು ಈ ಬಾರಿಯೂ ದಸರಾ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ದಸರಾ ಉತ್ಸವ ನಡೆದರೆ ಜನಪದ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಂತಾಗಿದೆ.ಅಬ್ದುಲ್ ಮಲೀಕ್ ಕನ್ನಡ ಕಾವಲು ಪಡೆ ತಾಲ್ಲೂಕು ಅಧ್ಯಕ್ಷ
‘ಕಲಾಸೇವೆಗೆ ಅವಕಾಶ ಕೊಡಿ’ ದಶಕಗಳಿಂದಲೂ ಜನಪದ ಕಲೆಯನ್ನೇ ನಂಬಿ ಬದುಕುತ್ತಿದ್ದೇವೆ. ಕಲಾ ವೃತ್ತಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಳ್ಳಿ ಹಳ್ಳಿಗಳಿಗೂ ಹೋಗಿ ಕಲೆ ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ಜಿಲ್ಲೆಯಲ್ಲಿ ದಸರಾ ಉತ್ಸವ ನಡೆದರೆ ಕಲಾ ಪ್ರದರ್ಶನಕ್ಕೆ ವೇದಿಕೆ ಸಿಗಲಿದೆ ಕಲಾವಿದರಿಗೆ ಬೆಲೆ ಸಿಗುತ್ತದೆ. ದಸರಾ ನಡೆಯದೆ ಹೋದರೆ ಕಲೆಗೆ ಬೆಲೆ ಇಲ್ಲದಂತಾಗುತ್ತದೆ. ಗ್ರಾಮೀಣ ದಸರವನ್ನಾದರೂ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದರೆ ಕಲಾವಿದರ ಕಲೆಯ ಮೇಲೆ ಬರೆ ಎಳೆದಂತಾಗುತ್ತದೆ.ಕೈಲಾಸ ಮೂರ್ತಿ ಜನಪದ ಕಲಾವಿದ ಕೊಳ್ಳೇಗಾಲ
ರಾಜವಂಶಸ್ಥರ ಆಳ್ವಿಕೆಯ ನೆಲ ಚಾಮರಾಜನಗರ ಜಿಲ್ಲೆ ಹಿಂದೆ ಮೈಸೂರು ಭಾಗವಾಗಿ ರಾಜವಂಶಸ್ಥರ ಆಳ್ವಿಕೆಯ ಪ್ರದೇಶವಾಗಿತ್ತು. ದಸರಾ ಮೈಸೂರು ಭಾಗಕ್ಕೆ ಮಾತ್ರವಲ್ಲ; ಚಾಮರಾಜನಗರ ಜಿಲ್ಲೆಯಲ್ಲೂ ಆಚರಣೆ ಮಾಡಲೇಬೇಕು. ಮೈಸೂರು ರಾಜ ಪರಂಪರೆಯ ಹಲವು ಕುರುಹುಗಳು ಇಂದಿಗೂ ಜಿಲ್ಲೆಯಲ್ಲಿವೆ. ಕಲಾವಿದರ ಸಂಖ್ಯೆ ಯತೇಚ್ಛವಾಗಿದೆ. ಕಲಾವಿದರನ್ನು ಬೆಳೆಸುವ ಗುರುತಿಸುವ ದಸರಾ ನಿಲ್ಲಿಸಬಾರದು. ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಮಾಡಬೇಕು.ಬಾಳಗುಣಸೆ ಮಂಜುನಾಥ್ ಸಾಹಿತಿ
ಮುಖ್ಯಮಂತ್ರಿ ಹೇಳಿಕೆ ಖಂಡನೀಯ ಚಾಮರಾಜನಗರದಲ್ಲಿ ಈ ಬಾರಿ ದಸರಾ ಉತ್ಸವ ಮಾಡಲಾಗುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ಜಿಲ್ಲೆಯ ಕಲಾವಿದರು ಮೈಸೂರು ದಸರಾ ವೇದಿಕೆಯಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗುವುದಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಜನಿಸಿರುವ ಸ್ಥಳದಲ್ಲಿ ದಸರಾ ಮಹೋತ್ಸವ ನಡೆಸಲೇಬೇಕು.ಉಮ್ಮತ್ತೂರು ಬಸವರಾಜು ಜನಪದ ಕಲಾವಿದ
ಹಳೆ ಮೈಸೂರು ಭಾಗದ ಅಸ್ಮಿತೆ ಚಾಮರಾಜನಗರ ಹಳೆ ಮೈಸೂರು ಭಾಗದ ಸಾಂಸ್ಕೃತಿಕ ಇತಿಹಾಸ ಒಳಗೊಂಡ ಜಿಲ್ಲೆಯಾಗಿದ್ದು ಮೈಸೂರು ದಸರಾ ಜೊತೆ ನಂಟು ಹೊಂದಿದೆ. ಪ್ರತಿ ವರ್ಷ ಜಿಲ್ಲಾ ಕೇಂದ್ರದಲ್ಲಿ ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಇದರೊಂದಿಗೆ ಜಿಲ್ಲೆಯ ಕಲಾವಿದರು ಕಲೆಗಳನ್ನು ಪ್ರದರ್ಶಿಸುತ್ತ ಸಾಂಪ್ರದಾಯಿಕ ದಸರಾ ವೈಭವವನ್ನು ಹೆಚ್ಚಿಸಿದ್ದಾರೆ. ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ದಸರಾ ನಡೆಸಲು ಸರ್ಕಾರ ಚಿತ್ತ ಹರಿಸಲಿಅನಂತ್ ಚಿತ್ರ ಕಲಾವಿದ ಮದ್ದೂರು ಯಳಂದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.