ಚಾಮರಾಜನಗರ:ಅದ್ಧೂರಿ ಗಣೇಶೋತ್ಸವಕ್ಕೆ ಹೆಸರಾದ ಚಾಮರಾಜನಗರದ ಶ್ರೀ ವಿದ್ಯಾಗಣಪತಿ ಮಂಡಳಿ ಕೂಡ ಈ ವರ್ಷ ಸರಳವಾಗಿ ಗಣೇಶೋತ್ಸವ ಆಯೋಜಿಸಿದ್ದು, ಎರಡೂವರೆ ಅಡಿಯ ಗಣಪತಿ ವಿಗ್ರಹವನ್ನು ಪ್ರತಿಷ್ಠಾನೆ ಮಾಡಿದೆ. ಈ ಬಾರಿಯದ್ದು, 58ನೇ ವರ್ಷದ ಗಣೇಶೋತ್ಸವ.
ಮಂಡಳಿಯು ಪ್ರತಿ ವರ್ಷ 30 ದಿನಗಳಿಗಿಂತಲೂ ಹೆಚ್ಚು ಕಾಲ ಗಣೇಶನನ್ನು ಪೂಜಿಸಿ, ನಂತರ ವಿಸರ್ಜನೆ ಮಾಡುತ್ತಿತ್ತು. ದಿನಪೂರ್ತಿ ನಡೆಯುತ್ತಿದ್ದ ವಿಸರ್ಜನೆ ಮೆರವಣಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಗಣೇಶೋತ್ಸವವನ್ನು ಮೂರು ದಿನಕ್ಕೆ ಮಿತಿಗೊಳಿಸಿದೆ.
ಶನಿವಾರ ಬೆಳಿಗ್ಗೆ 11.30ಕ್ಕೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮಂಗಳವಾರ ಲೋಕಕಲ್ಯಾಣಾರ್ಥವಾಗಿ ಗಣಪತಿ ಹವನ ನೆರವೇರಿತು. ಸೋಮವಾರ ಸಂಜೆ ಸೂರ್ಯಾಸ್ತದ ನಂತರ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
‘ಸರ್ಕಾರದ ಮಾರ್ಗಸೂಚಿಗೆ ಅನುಸಾರವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಮೂರು ದಿನ ಮಾತ್ರ ಪೂಜಿಸುತ್ತಿದ್ದೇವೆ. ಸೋಮವಾರ ಸಂಜೆ ವಿಗ್ರಹ ವಿಸರ್ಜನೆ ನಡೆಯಲಿದೆ. ಪ್ರತಿಷ್ಠಾಪನೆ ಮಾಡಿದ ಸ್ಥಳದ ಸಮೀಪವೇ ಡ್ರಮ್ಗೆ ನೀರು ತುಂಬಿಸಿ, ಅದರಲ್ಲಿ ವಿಸರ್ಜನೆ ಮಾಡುತ್ತೇವೆ’ ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.