ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕ್ಲಿಕ್ ಆಗದ ಛಾಯಾಗ್ರಾಹಕರ ಬದುಕು

ಲಾಕ್‌ಡೌನ್‌: ಮದುವೆ, ಶುಭ ಸಮಾರಂಭಗಳಿಲ್ಲ
Last Updated 4 ಮೇ 2020, 2:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಹೇರಲಾಗಿರುವ ಲಾಕ್‌ಡೌನ್‌, ಛಾಯಾಗ್ರಹಣವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ನೂರಾರು ಜನರ ಸಂಪಾದನೆಯನ್ನೇ ಕಸಿದಿದೆ.

ಮದುವೆ, ನಾಮಕರಣ ಸೇರಿದಂತೆ ಶುಭ ಸಮಾರಂಭಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಫೋಟೊ, ವಿಡಿಯೊ ತೆಗೆಯುತ್ತಿದ್ದ ವಿಡಿಯೊಗ್ರಾಫರ್‌ ಹಾಗೂ ಛಾಯಾಗ್ರಾಹಕರಿಗೆ ಈಗ ಕೆಲಸ ಇಲ್ಲ. ಸ್ಟುಡಿಯೊ ಇಟ್ಟುಕೊಂಡಿದ್ದವರಿಗೂ ಒಂದೂವರೆ ತಿಂಗಳಿಂದ ಏನೂ ಸಂಪಾದನೆ ಆಗಿಲ್ಲ.

ಜಿಲ್ಲೆಯಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಮಂದಿ ಛಾಯಾಗ್ರಹಣವನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೇಸಿಗೆ ರಜಾ ಕಾಲವಾಗಿರುವುದರಿಂದ ಈ ಸಮಯದಲ್ಲಿ ನೂರಾರು ಸಮಾರಂಭಗಳು ನಡೆಯುತ್ತವೆ. ಗೃಹ ಪ್ರವೇಶ, ನಿಶ್ಚಿತಾರ್ಥ, ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗಾಗಿ ಹಲವರು ಛಾಯಾಗ್ರಾಹಕರಿಗೆ ಮುಂಗಡ ನೀಡಿ ದಿನಾಂಕ ಕಾಯ್ದಿರಿಸಿದ್ದರು.ಆದರೆ, ಕೋವಿಡ್–19 ಪರಿಣಾಮ ಎಲ್ಲಾ ಸಮಾರಂಭಗಳು ಮನೆಗೆ ಮಿತಿಗೊಂಡಿವೆ.

‘ಛಾಯಾಗ್ರಾಹಕರ ಬದುಕು ಈಗ ಅಡಕತ್ತರಿಯಲ್ಲಿ ಸಿಕ್ಕಿದಂತೆ ಆಗಿದೆ. ಮುಂಗಡ ಕೊಟ್ಟವರು ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಕೆಲವರ ಶುಭ ಸಮಾರಂಭಗಳು ಮುಗಿದಿವೆ. ಕೆಲವರು ಕಾರ್ಯಗಳನ್ನು ಮುಂದೂಡಿ ಶಾಸ್ತ್ರೋಕ್ತವಾಗಿ ನಡೆಸಲಾಗದೆ ರದ್ದುಗೊಳಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ನಮ್ಮ ಕುಟುಂಬವನ್ನು ಯಾರು ಸಲಹುತ್ತಾರೆ’ ಎಂದು ಛಾಯಾಗ್ರಾಹಕ ಪ್ರದೀಪ್ ಕುಮಾರ್ ಅಲವತ್ತುಕೊಂಡರು.

ಜೀವನ ಕಷ್ಟ: ‘ನಾವು ವಿಡಿಯೊ ಚಿತ್ರೀಕರಣ ಮತ್ತು ಚಿತ್ರಗಳನ್ನು ಸೆರೆ ಹಿಡಿದು ಜೀವನ ಸಾಗಿಸುತ್ತಿರುವವರು. ಲಾಕ್‌ಡೌನ್‌ ನಂತರ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ತಾಲ್ಲೂಕಿನಾದ್ಯಂತ 230ಕ್ಕೂ ಹೆಚ್ಚು ಛಾಯಾಗ್ರಾಹಕರು ಇದ್ದಾರೆ. ಈ ಕೆಲಸ ಬಿಟ್ಟರೆ ಬೇರೆ ಯಾವ ವೃತ್ತಿಯಲ್ಲೂ ತೊಡಗಿಲ್ಲ’ ಎಂದು ಛಾಯಾಗ್ರಾಹಕ ಗಿರೀಶ್‌ ಹೇಳಿದರು.

‘ವರ್ಷದಲ್ಲಿ ಎರಡು ತಿಂಗಳು ಬಿಟ್ಟರೆ ಉಳಿದ 10 ತಿಂಗಳೂ ನಮಗೆ ಕೆಲಸ ಇರುತ್ತಿತ್ತು.ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚು. ಉತ್ತಮ ಆದಾಯವೂ ಬರುತ್ತಿತ್ತು. ಕೋವಿಡ್– 19ನಿಂದ ಭಾರಿ ತೊಂದರೆಯಾಗಿದೆ. ಮುಂಗಡ ಪಡೆದಿದ್ದ ಹಣವನ್ನು ಕೆಲವರಿಗೆ ಹಿಂದಿರುಗಿಸಿದ್ದೇವೆ. ಹೋಟೆಲ್, ಆಟೋ ಚಾಲಕರಿಗೆ, ದಿನಸಿ ಅಂಗಡಿಯವರಿಗೆ, ಬಾರ್, ಗಾರೆ ಕೆಲಸ, ತರಕಾರಿ ಮಾರುಕಟ್ಟೆ ಸೇರಿದಂತೆ ಅನೇಕ ಕಡೆ ಕೆಲಸ ಮಾಡುವವರಿಗೆ ಮೇ 4ರಿಂದ ಕೆಲಸ ಮಾಡಲು ಸರ್ಕಾರ ಅವಕಾಶ ಕೊಟ್ಟಿದೆ. ಆದರೆ, ಮದುವೆ, ಸಮಾರಂಭ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಕಾರ್ಯಕ್ರಮಗಳು ನಡೆದರೆ ಮಾತ್ರ ನಮಗೆ ಬದುಕು. ಅಂಗಡಿ ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದರು.

***

ನಾವು ವಿಡಿಯೊ, ಫೋಟೊ ತೆಗೆದು ಜೀವನ ನಡೆಸುತ್ತಿರುವರು. ಒಂದೂವರೆ ತಿಂಗಳಿನಿಂದ ಒಂದು ರೂಪಾಯಿ ಸಂಪಾದನೆ ಆಗಿಲ್ಲ. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಬೇಕು. ಸುರೇಶ್ ಕುಮಾರ್, ಕೊಳ್ಳೇಗಾಲ ಫೋಟೋ‌ ಮತ್ತು ವೀಡಿಯೊಗ್ರಾಫರ್‌ ಯೂನಿಯನ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT