ಯಳಂದೂರು: ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಮುಖ್ಯಾಧಿಕಾರಿ ಮಹೇಶ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಕಚೇರಿ ನೌಕರರು ಮತ್ತು ಸದಸ್ಯರು ಮತದಾನ ಜಾಗೃತಿಗಾಗಿ ಗುರುವಾರ ಆಯೋಜಿಸಿದ್ದ ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಐದು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಯುತ್ತದೆ. ಪ್ರತಿ ಮತಗಟ್ಟೆಯಲ್ಲೂ ಶೇಕಡವಾರು ಪ್ರಮಾಣ ಹೆಚ್ಚಾಗುತ್ತಲೇ ಇದೆ. ಮತದಾರರು ಮತ ಹಾಕುವ ಮೂಲಕ ಪ್ರಜಾ ಪ್ರಭುತ್ವದ ಯಶಸ್ಸಿಗೆ ಶ್ರಮಿಸಬೇಕು ಎಂದರು.
ಪ.ಪಂ, ಕಚೇರಿಯಿಂದ ಹೊರಟ ಸವಾರರು ಕೆಕೆ ರಸ್ತೆ, ಹಳೇ ಅಂಚೆ ಕಚೇರಿ, ಬಳೆಪೇಟೆ, ದೊಡ್ಡಂಗಡಿ ಬೀದಿ, ಬಸ್ ನಿಲ್ದಾಣ ಹಾಗೂ ಸಂತೆಮರಹಳ್ಳಿ ರಸ್ತೆಗಳಲ್ಲಿ ತೆರಳಿ ಮತದಾನ ಜಾಗೃತಿ ಮೂಡಿಸಿದರು.
ಎಂಜಿನಿಯರ್ ನಾಗೇಂದ್ರ, ಮಲ್ಲಿಕಾರ್ಜುನಸ್ವಾಮಿ, ರಘು ಹಾಗೂ ಇತರರು ಇದ್ದರು.