ಗುಡಿಬಂಡೆ: ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಉಸ್ತುವಾರಿ ವಹಿಸಿದಾಗ ಮಾತ್ರ ಗುಣಮಟ್ಟದ ಕಾಮಗಾರಿ ಸಾಧ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ತಾಲ್ಲೂಕಿನ ಗುಮ್ಮರೆಡ್ಡಿಹಳ್ಳಿ ಹಾಗೂ ಬೀಚಗಾನಹಳ್ಳಿ ಕ್ರಾಸ್ನಿಂದ ತಿರುಮಣಿ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಾಸಕನಾದ ಮೊದಲ ಅವಧಿಯಲ್ಲಿ ತಾಲ್ಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳು ಹದೆಗೆಟ್ಟಿದ್ದವು. 7 ವರ್ಷಗಳಲ್ಲಿ ಶೇ 85ರಷ್ಟು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕಾರಣಾಂತರಗಳಿಂದ ಶೇ 15ರಷ್ಟು ರಸ್ತೆ ಕಾಮಗಾರಿಬಾಕಿ ಇದ್ದು ಉಳಿದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.
ಸೋಮೇನಹಳ್ಳೀ ಹಾಗೂ ಕಾಟೇನಹಳ್ಳಿ ಗ್ರಾಮದಿಂದ ಗುಮ್ಮರೆಡ್ಡಿಹಳ್ಳಿ ಗ್ರಾಮದ ಸಂಪರ್ಕ ರಸ್ತೆಗೆ ₹30 ಲಕ್ಷ, ಬೀಚಗಾನಹಳ್ಳಿ ಕ್ರಾಸ್ನಿಂದ ತಿರುಮಣಿ ಗ್ರಾಮದ ರಸ್ತೆಗೆ ₹50 ಲಕ್ಷ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಕಾಮಗಾರಿ ನಿಲ್ಲಿಸಿ. ನಾನೇ ಖುದ್ದು ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದರು.
ಈ ಹಿಂದೆ ಕೃಷಿ ಇಲಾಖೆಯಿಂದ ಶೇಂಗಾ ಬಿತ್ತನೆ ಬೀಜ ಪ್ರಾತ್ಯಕ್ಷಿಕೆ ಮಾಡಲು ಉಚಿತವಾಗಿ ನೀಡಲಾಗುತ್ತಿತ್ತು. ಆಗ ಬೇಕಾದ ರೈತರು ಪಡೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಒಂದೇ ಗ್ರಾಮದ ಆಯ್ದ ರೈತರಿಗೆ ಈ ಉಚಿತ ಬಿತ್ತನೆ ಬೀಜ ನೀಡಲು ತಿಳಿಸಿದ್ದೇನೆ. ಹೀಗೆ ಮಾಡಿದರೆ ಈ ಯೋಜನೆಯ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.