ಈಗಲೂ ನೀವು ಕ್ಷೇತ್ರ ಅಧ್ಯಯನ, ಬರವಣಿಗೆಯಲ್ಲಿ ಸಕ್ರಿಯವಾಗಿದ್ದೀರಿ. ಈಗ ಯಾವ ವಿಚಾರವಾಗಿ ನಿಮ್ಮ ಬರವಣಿಗೆ ಸಾಗಿದೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಬೈರವ ಮತ್ತು ಕರಗದಮ್ಮ ದೇವಾಲಯಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬರೆಯಬೇಕಾಗಿದೆ. ಕಳೆದ ಮೂರು ತಿಂಗಳಲ್ಲಿ 40ಕ್ಕೂ ಹೆಚ್ಚು ದೇಗುಲಗಳಿಗೆ ಭೇಟಿ ನೀಡಿದ್ದೇನೆ. ಕ್ಷೇತ್ರಾಧ್ಯಯನ ನಡೆಸುತ್ತಿದ್ದೇನೆ. ಈ ಪುಸ್ತಕಗಳು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿವೆ.
ಈ ಹಿಂದೆ ತಾಲ್ಲೂಕು ಸಮ್ಮೇಳನದ ಅಧ್ಯಕ್ಷರಾಗಿದ್ದಿರಿ. ಈಗ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆವಹಿಸುತ್ತಿದ್ದೀರಿ...
ನೀವೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಹಾಗೂ ಎಲ್ಲ ಪದಾಧಿಕಾರಿಗಳು ಕೇಳಿಕೊಂಡರು. ಕಸಾಪ ಸದಸ್ಯರೆಲ್ಲ ನನ್ನ ದಶಕಗಳ ಸ್ನೇಹಿತರು. ಎಲ್ಲರ ಕೋರಿಕೆ ಒಪ್ಪಿದೆ. 1976ರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆ ನಿಂತವನು ನಾನು. ಬೇರು ಕೋಲಾರವಾದರೂ ಸಾಹಿತ್ಯದ ಮೂಲಕ ವೃಕ್ಷವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.
ಭಾಷೆ ವಿಚಾರವಾಗಿ ರಾಜ್ಯದ ಹಲವು ಕಡೆ ಆಗಾಗ್ಗೆ ತಗಾದೆಗಳು ಜರುಗುತ್ತಿವೆ. ದ್ವಿಭಾಷಿಕ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಭಾಷಾ ಸಾಮರಸ್ಯವಿದೆ. ಇದು ಯಾವ ರೀತಿ ಮಾದರಿಯಾದುದು?
ಕನ್ನಡ ಮತ್ತು ತೆಲುಗಿನ ಭಾಷಾ ಸಾಮರಸ್ಯಕ್ಕೆ ಈ ಭಾಗದಲ್ಲಿ ಶತಮಾನಗಳ ಇತಿಹಾಸವಿದೆ. ಈ ಎರಡೂ ಭಾಷೆಗಳ ನಡುವೆ ಕೊಡುಕೊಳ್ಳುವಿಕೆಯೂ ಇದೆ. ಈ ಕೊಡುಕೊಳ್ಳುವಿಕೆ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೂ ಕಾರಣವಾಗಿದೆ. ಭಾಷೆಯ ವಿಚಾರವಾಗಿ ರಾಜ್ಯದ ಹಲವು ಕಡೆಗಳಲ್ಲಿ ಗಲಾಟೆಗಳು ಸಂಭವಿಸುತ್ತಿವೆ. ಆದರೆ ನಮ್ಮಲ್ಲಿ ಪರಸ್ಪರ ಸಾಮರಸ್ಯವಿದೆ.
‘ಸಿರಿ ಭೂವಲಯ’ ಕೃತಿಯ ಕರ್ತೃ ಕುಮುದೇಂದು ಮುನಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಳ್ಳಿಯವರು. ಇಡುಗೂರಿನ ರುದ್ರ ಕವಿ, ಗೂಳೂರಿನ ಜಚನಿ, ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ನಂದಿ ತಿಮ್ಮನ್ನ, ಕೈವಾರ ತಾತಯ್ಯ, ವೀರಬ್ರಹ್ಮಯ್ಯ ಹೀಗೆ ಅನೇಕ ಮಹತ್ವದ ಕವಿಗಳು ಅಂದು ಇಂದು ಜಿಲ್ಲೆಯಲ್ಲಿ ಇದ್ದಾರೆ. ಆಧುನಿಕ ಕನ್ನಡ ಸಾಹಿತ್ಯಕ್ಕೂ ಜಿಲ್ಲೆಯ ಸಾಹಿತಿಗಳು ದೊಡ್ಡ ಕೊಡುಗೆ ನೀಡಿದ್ದಾರೆ.
ಜಿಲ್ಲೆಯ ಗಡಿಭಾಗಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಆಶಾದಾಯವಾಗಿಲ್ಲ. ಈ ಬಗ್ಗೆ ಸಮ್ಮೇಳನಾಧ್ಯಕ್ಷರಾಗಿ ಏನು ಹೇಳುವಿರಿ?
ನಮ್ಮ ಮೊಮ್ಮಕ್ಕಳು ಕನ್ನಡ ಮಾತನಾಡುತ್ತಿಲ್ಲ. ಕಾನ್ವೆಂಟ್ಗಳಲ್ಲಿ ಕನ್ನಡದ ಓದು, ಬರಹ ಇಲ್ಲ. ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಮಟ್ಟಕ್ಕೆ ಬಂದಿದೆ. ಪಂಚತಾರಾ ಹೋಟೆಲ್ಗಳಲ್ಲಿ ಭದ್ರತೆ ಕೆಲಸ ಬೇಕು ಎಂದರೂ ಆಂಗ್ಲಭಾಷೆ ಬೇಕು ಎನ್ನುವ ಮಟ್ಟದಲ್ಲಿ ಇದ್ದೇವೆ. ಆದ್ದರಿಂದ ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯಾಗಿ ನೋಡಬೇಕು. ರಾಜ್ಯದಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು.
ಹಾಜರಾತಿ ಇಲ್ಲ ಎನ್ನುವ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಮಕ್ಕಳ ದಾಖಲಾತಿಗೆ ಪ್ರೋತ್ಸಾಹದ ಕ್ರಮ ಅನುಸರಿಸಬೇಕು.
ನೀರಾವರಿ ವಿಚಾರದಲ್ಲಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಏನು ಹೇಳುವಿರಿ?
ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಇದರಿಂದ ಅಂತರ್ಜಲ ಹೆಚ್ಚಿದೆ. ಆದರೆ ಎರಡು ಹಂತದಲ್ಲಿ ಶುದ್ಧೀಕರಣ ಆಗುತ್ತಿದೆ. ಇದನ್ನು ಮೂರು ಹಂತದಲ್ಲಿ ಶುದ್ಧೀಕರಿಸದಿದ್ದರೆ ಭವಿಷ್ಯದಲ್ಲಿ ದುಷ್ಪರಿಣಾಮ ಎದುರಾಗಲಿದೆ. ಜಿಲ್ಲೆಗೆ ಶುದ್ಧ ನೀರು ಹರಿಸಬೇಕು.
ಜಿಲ್ಲೆಯ ರೈತರು ಕಷ್ಟಜೀವಿಗಳು. ದೊರೆಯುವ ಅಲ್ಪನೀರಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ನೀರು ಕೊಟ್ಟರೆ ರಾಜ್ಯಕ್ಕೆ ಅನ್ನ ನೀಡುವ ಶಕ್ತಿ ಇಲ್ಲಿನ ರೈತರಿಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನವಹಿಸಬೇಕು.
ಜಿಲ್ಲೆಯಲ್ಲಿ ಜೀವ ನದಿಗಳು ಇಲ್ಲ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದು ನೀರು ಆಂಧ್ರಕ್ಕೆ ಹೋಗುತ್ತಿದೆ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದಾಗ ಆ ನೀರನ್ನು ಸಂಗ್ರಹಿಸಲು ಅಣೆಕಟ್ಟೆ ಜಿಲ್ಲೆಗೆ ಅಗತ್ಯವಿದೆ. ಎತ್ತಿನಹೊಳೆ ನೀರಾವರಿ ಯೋಜನೆ ಶೀಘ್ರ ಅನುಷ್ಠಾನವಾದರೆ ಜನರಿಗೆ ಅನುಕೂಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.