ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಗಾಳಿ ಅಬ್ಬರ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೆಲವೆಡೆ ವಿದ್ಯುತ್ ಕಂಬಗಳು, ವೃಕ್ಷಗಳು ಧರೆಗುರುಳಿವೆ, ಗುಡ್ಡದ ಮಣ್ಣು ಕುಸಿದಿದೆ.
ಕೊಟ್ಟಿಗೆಹಾರ ಸಮೀಪ ದೇವನಗೂಲ್ ಗ್ರಾಮದ ಸತೀಶ್ ಆಚಾರ್ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಸತೀಶ್ ತಾಯಿ ಪುಷ್ಪಾ ಅವರಿಗೆ ಗಾಯಗಳಾಗಿವೆ. ಸುಂಕಸಾಲೆ ಬಳಿ ದುರ್ಗದಹಳ್ಳಿಯಲ್ಲಿ ಗುಡ್ಡದಮಣ್ಣು ಕುಸಿದಿದೆ. ಕೆಳಗೂರಿನ ಮೇಗೂರು ಅಂಗರಮಕ್ಕಿಯ ಐದು ಕುಟುಂಬಗಳವರು ಸ್ವಯಂಪ್ರೇರಿತವಾಗಿ ಸುರಕ್ಷತಾ ಸ್ಥಳಕ್ಕೆ ತೆರಳಿದ್ದಾರೆ.
ಚಾರ್ಮಾಡಿ ಘಾಟಿ ಮಾರ್ಗದ ಹಲವು ಕಡೆ ಮರಗಳು ಬಿದ್ದಿವೆ. ಮೂಡಿಗೆರೆ- ಮಂಗಳೂರು ರಸ್ತೆ ಮತ್ತು ಮೂಡಿಗೆರೆ - ಬಾಳೆಹೊನ್ನೂರು ಮಾರ್ಗದಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಫಲ್ಗುಣಿ ಮುಖ್ಯರಸ್ತೆ, ಬಾನಹಳ್ಳಿ–ಸಾರಗೋಡು ರಸ್ತೆ, ಬಣಕಲ್ ಮತ್ತಿಕಟ್ಟೆ ರಸ್ತೆಗಳಲ್ಲಿ ಅಡ್ಡಲಾಗಿ ಮರಗಳು ಬಿದ್ದಿವೆ.
ಮೂಡಿಗೆರೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆ, ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಕಡಿತವಾಗಿದೆ. 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಕಳಸ ಬಳಿಯ ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ. ಶೃಂಗೇರಿ ಭಾಗದಲ್ಲಿ ನಾಲ್ಕು ಕಡೆ ವಿದ್ಯುತ್ ಕಂಬಗಳು ಬಿದ್ದಿವೆ. ಕೊಪ್ಪ– ಶೃಂಗೇರಿ ಮಾರ್ಗದಲ್ಲಿ ಮರ ಉರುಳಿ ಸಂಚಾರ ಬಂದ್ ಆಗಿತ್ತು.
ತರೀಕೆರೆಯಲ್ಲಿ ಆರ್ಎಂಸಿ ಯಾರ್ಡ್ನಲ್ಲಿ ಮರವೊಂದು ಉರುಳಿ ಬಿದ್ದಿದೆ. ಕೊಪ್ಪ, ಎನ್.ಆರ್.ಪುರ, ತರೀಕೆರೆ ಸಹಿತ ವಿವಿಧಡೆ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ.