ಕಳಸ: ಸಂಸೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೇಯಾಂಶ ಕುಮಾರ್ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಕುಮಾರ್ ಕುದುರೆಮುಖ ಪೊಲೀಸರಿಗೆ ದೂರು ನೀಡಿದ್ದಾರೆ.
‘ಸದಸ್ಯ ಮಂಗಳವಾರ ಸಂಜೆ 5 ಗಂಟೆಗೆ ಸಂಸೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದರು. ತನಗೆ ಬರಬೇಕಾದ ಹಳೆಯ ಕಾಮಗಾರಿಗಳ ಬಿಲ್ ಪಾವತಿ ಮಾಡುವಂತೆ ಅಲ್ಲಿದ್ದ ಕಚೇರಿ ಸಿಬ್ಬಂದಿ ವಿರುದ್ಧ ಕೂಗಾಡಿದ್ದಾರೆ. ಬಿಲ್ ಪಾವತಿ ಮಾಡದಿದ್ದರೆ ಪಂಚಾಯಿತಿಯ ದಾಖಲೆಗಳನ್ನು ನಾಶಪಡಿಸುವ ಬೆದರಿಕೆ ಹಾಕಿದ್ದಾರೆ. ಹೊರನಾಡು ಪಂಚಾಯಿತಿಯಲ್ಲಿ ಕರ್ತವ್ಯದಲ್ಲಿ ಇದ್ದ ನನಗೆ ಸಂಸೆ ಪಂಚಾಯಿತಿ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದರು. ಆಗ ನಾನು ಶ್ರೇಯಾಂಶ ಕುಮಾರ್ ಅವರಿಗೆ ಕರೆ ಮಾಡಿದೆ. ಅವರು ನನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೊಲೆ ಬೆದರಿಕೆ ಕೂಡ ಹಾಕಿದರು’ ಎಂದು ಅರುಣ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಕುದುರೆಮುಖ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.