ಮಂಗಳೂರು: ನಗರದ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಹೆರಿಗೆಗೆ ಹೊರಟಿದ್ದ ತಮ್ಮ ಸಹೋದ್ಯೋಗಿ ಕಾನ್ಸ್ಟೆಬಲ್ ಒಬ್ಬರ ಸೀಮಂತ ಆಚರಿಸಿ ಸಂಭ್ರಮದಿಂದ ಬೀಳ್ಕೊಟ್ಟಿದ್ದಾರೆ.
ಕದ್ರಿ ಠಾಣೆಯ ಕಾನ್ಸ್ಟೆಬಲ್ ಗೌರಮ್ಮ ಅವರು ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ರಜೆ ಮೇಲೆ ತೆರಳುತ್ತಿದ್ದಾರೆ. ಶುಕ್ರವಾರ ಬೆಂದೂರ್ವೆಲ್ನ ಸೇಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ರಮವೊಂದರಲ್ಲಿ ಗೌರಮ್ಮ ಅವರಿಗೆ ಸೀಮಂತ ನೆರವೇರಿಸಲಾಗಿದೆ.
ಕದ್ರಿ ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಮ ಅವರು ಕಾನ್ಸ್ಟೆಬಲ್ ಸೀಮಂತದ ನೇತೃತ್ವ ವಹಿಸಿದ್ದರು. ಅವರೊಂದಿಗೆ ಠಾಣೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಜೋಡಿಸಿದ್ದರು. ಗೌರಮ್ಮ ಅವರ ಪತಿ ಶಿವಾನಂದ ಹಾಗೂ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.