ಚನ್ನಗಿರಿ: ‘ಇತ್ತೀಚಿನ ದಿನಗಳಲ್ಲಿ ಪರಿಸರದ ಅಸಮತೋಲನದಿಂದಾಗಿ ಕಾಲ ಕಾಲಕ್ಕೆ ಮಳೆಯಾಗದೇ ಕೊರತೆಯಾಗುತ್ತಿದೆ. ಬೇಸಿಗೆ ಸಮಯದಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಿಸುವಂತಾಗಿದೆ. ಇಂತಹ ಸಮಯದಲ್ಲಿ ತುಮ್ಕೋಸ್ ಸಂಸ್ಥೆ ಸೋಲಾರ್ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಪಟ್ಟಣದ ತುಮ್ಕೋಸ್ ಕಟ್ಟಡದ ಮೇಲೆ ಸೋಮವಾರ 65 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ಸರ್ಕಾರಿ ಗೋಮಾಳಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ₹ 1,500 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಕೂಡಾ ಆಗಿದೆ. 31 ಸಾವಿರ ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ’ ಎಂದರು.
ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ಮಾತನಾಡಿ, 65 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಹೆಚ್ಚುವರಿ ವಿದ್ಯುತನ್ನು ಬೆಸ್ಕಾಂಗೆ ಒಂದು ಯೂನಿಟ್ಗೆ ₹ 3.74 ರಂತೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ತುಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎ. ಮಧು, ನಿರ್ದೇಶಕರಾದ ಟಿ.ವಿ. ರಾಜು ಪಟೇಲ್, ಜಿ.ಆರ್. ಪ್ರೇಮಾ ಲೋಕೇಶಪ್ಪ, ಎಂ.ಸಿ. ದೇವರಾಜ್, ಚಂದ್ರಶೇಖರ್, ಗಂಗಾಧರಪ್ಪ ಉಪಸ್ಥಿತರಿದ್ದರು.