ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಮಂಗಳೂರು-ಬೆಂಗಳೂರು ರಸ್ತೆಯ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ 34-ನೆಕ್ಕಿಲಾಡಿಯಲ್ಲಿ ನಿರ್ಮಿಸಲಾದ ಸಂಪರ್ಕ ರಸ್ತೆ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ತೊಡಕಾಗಿತ್ತು. ಸಮಸ್ಯೆ ನಿವಾರಣೆ ಸಂಬಂಧ ಗುರುವಾರ ಕಾಮಗಾರಿ ನಡೆಸಲಾಯಿತು.
ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಕಂಪನಿ ಸಿಬ್ಬಂದಿ ಪರಿಶೀಲನೆ ನಡೆಸಿ ರಸ್ತೆಯ ಕೆಸರನ್ನು ತೆಗೆದು, ಜಲ್ಲಿ ಪುಡಿ, ಹೆದ್ದಾರಿ ನಿರ್ಮಾಣ ಸಂದರ್ಭ ರಸ್ತೆಯಿಂದ ಅಗೆದಿರುವ ಡಾಂಬರನ್ನು ಹರಡಿದರು. ಯಂತ್ರಗಳ ಮೂಲಕ ರಸ್ತೆಯನ್ನು ಸಮತಟ್ಟು ಮಾಡಿದರು.
ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ 34-ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕುಡಿಪ್ಪಾಡಿ ವರೆಗಿನ ಸುಮಾರು 1 ಕಿ.ಮೀ. ವರೆಗೆ ಮಣ್ಣು ಹಾಕಿ ಸಂಪರ್ಕ ರಸ್ತೆ ನಿರ್ಮಿಸಲಾಗಿತ್ತು. ಆದರೆ, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿರಲಿಲ್ಲ. ಕೆಲವು ಕಡೆ ಚರಂಡಿ ಇದ್ದರೂ ಅದು ರಸ್ತೆಯಿಂದ ಎತ್ತರದಲ್ಲಿತ್ತು. ಮತ್ತೆ ಕೆಲವು ಕಡೆ ಚರಂಡಿ ಅಪೂರ್ಣವಾಗಿತ್ತು. ಹೀಗಾಗಿ ಮಳೆ ನೀರು ಹರಿದು ಹೋಗುಗಲು ಅವಕಾಶ ಇಲ್ಲದೆ ನೀರು ರಸ್ತೆಯಲ್ಲೇ ನಿಂತು ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿತ್ತು.
ಉಪ ವಿಭಾಗಾಧಿಕಾರಿ ಮಧ್ಯಪ್ರವೇಶ: ಇಲ್ಲಿನ ರಸ್ತೆಯ ಅವ್ಯವಸ್ಥೆ ಹಾಗೂ ಜನರ ಸಮಸ್ಯೆ ಬಗ್ಗೆ ಗುರುವಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ತಕ್ಷಣವೇ ಕಾಮಗಾರಿ ನಿರ್ವಹಣೆ ಮಾಡುವವರಿಗೆ ಈ ಬಗ್ಗೆ ಸೂಚನೆ ನೀಡಿದ್ದರು.