ಬಂಟ್ವಾಳ: ಕೋವಿಡ್-19 ಲಾಕ್ಡೌನ್ ಮತ್ತು ಉದ್ಯೋಗ ಇಲ್ಲದೇ ಪರದಾಡುವ ಸಂಕಷ್ಟದಿಂದ ಪಾರಾಗಲು ಇಲ್ಲಿನ ಯುವಜನತೆ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮೊರೆ ಹೋಗಿದ್ದಾರೆ.
ಇಲ್ಲಿನ ದೇವಸ್ಯ ಪಡೂರು ಗ್ರಾಮದ ಅಲ್ಲಿಪಾದೆ ಸಮೀಪದ ನೂರ್ತಾಡಿ ಗದ್ದೆಯಲ್ಲಿ ಭತ್ತ ಕೃಷಿಗೆ ಗದ್ದೆ ಉಳುಮೆ ಮತ್ತು ನೇಜಿ ನಾಟಿ ಚಟುವಟಿಕೆಯಲ್ಲಿ ಸ್ಥಳೀಯ ಯುವಕರು ಕೈಜೋಡಿಸಿ ಗಮನ ಸೆಳೆದಿದ್ದಾರೆ.
ಸುಮಾರು ಮೂರೂವರೆ ಎಕರೆ ಗದ್ದೆಯಲ್ಲಿ ಯಂತ್ರೋಪಕರಣ ಇಲ್ಲದೇ ಕೋಣಗಳನ್ನು ಬಳಸಿ, ಗದ್ದೆ ಉಳುಮೆ ಮಾಡಲಾಗುತ್ತಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
‘ಈ ಹಿಂದೆ ಉದ್ಯೋಗ ಅರಸಿಕೊಂಡು ಬಹುತೇಕ ಮಂದಿ ಯುವಕರು ನಗರ ಕಡೆಗೆ ವಲಸೆ ಹೋಗಿದ್ದ ವೇಳೆ ಕಾರ್ಮಿಕರ ಕೊರತೆ ಕಾಡುತ್ತಿತ್ತು. ಇದೀಗ ಸ್ವತಃ ಯುವಕರೇ ಆಸಕ್ತಿಯಿಂದ ಕೃಷಿ ಚಟುವಟಿಕೆಗೆ ಮುಂದಾಗಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಗದ್ದೆ ಮಾಲೀಕ ಚಂದ್ರಹಾಸ ನೂರ್ತಾಡಿ.