ದಾವಣಗೆರೆ: ಹಳೇ ದಾವಣಗೆರೆಯ ದೇವರಹಟ್ಟಿಯಲ್ಲಿ ಭಾನುವಾರ ಒಬ್ಬರು ಕೋವಿಡ್ ನಿರೋಧಕ ಲಸಿಕೆ ಬೇಡ ಎಂದು ಟಾಯ್ಲೆಟ್ ಒಳಗೆ ಕುಳಿತು ಬಿಟ್ಟಿದ್ದರು. ಆರ್ಸಿಎಚ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ, ತಹಶೀಲ್ದಾರ್ ಬಿ.ಎನ್. ಗಿರೀಶ್ ನೇತೃತ್ವದಲ್ಲಿ ಅವರನ್ನು ಮನವೊಲಿಸಿ ಲಸಿಕೆ ಹಾಕಿಸಲಾಯಿತು.
ಹದಡಿಯಲ್ಲಿ 77 ವರ್ಷದ ವ್ಯಕ್ತಿಯೊಬ್ಬರು ತನ್ನ ಹಂಚಿನ ಮನೆಯ ಮಹಡಿ ಮೇಲೆ ಹತ್ತಿ ಕುಳಿತಿದ್ದರು. ಅವರನ್ನು ಜಾಗರೂಕವಾಗಿ ಕೆಳಗೆ ಇಳಿಸಿ ಲಸಿಕೆ ನೀಡಲಾಯಿತು. ದೇವರಹಟ್ಟಿ ಗ್ರಾಮದಲ್ಲಿ 114 ವರ್ಷದ ವೃದ್ಧರೊಬ್ಬರು ಈ ಪ್ರಾಯದಲ್ಲಿ ವ್ಯಾಕ್ಸಿನ್ ಯಾಕೆ ಎಂದು ಕುಳಿತಿದ್ದರು. ಅವರಿಗೂ ನೀಡಲಾಯಿತು. ಕೆಲವರು ಹೊಲದ ಕಡೆಗೆ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ಸಮಯಗಳ ಬಳಿಕ ಭಾನುವಾರ ಉತ್ತಮ ಪ್ರಮಾಣದಲ್ಲಿ ಲಸಿಕೆ ಹಾಕಲಾಯಿತು. 11,692 ಮಂದಿ ಮೊದಲ ಡೋಸ್ ಹಾಕಿಸಿಕೊಂಡರು. 15,128 ಮಂದಿ ಎರಡನೇ ಡೋಸ್ ಹಾಕಿಸಿಕೊಂಡರು. ಒಂದೇ ದಿನ ಒಟ್ಟು 26,820 ಮಂದಿಗೆ ಲಸಿಕೆ ನೀಡಲಾಯಿತು.
ಇಬ್ಬರಿಗೆ ಕೊರೊನಾ: ಜಿಲ್ಲೆಯಲ್ಲಿ ಇಬ್ಬರಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. ಒಟ್ಟು 14 ಸಕ್ರಿಯ ಪ್ರಕರಣಗಳಿವೆ.