ದಾವಣಗೆರೆ: ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹರಪನಹಳ್ಳಿ ತಾಲ್ಲೂಕು ಭಾರತೀಪುರದ ವ್ಯಕ್ತಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ.
ಭಾರತೀಪುರದ 49 ವರ್ಷದ ವ್ಯಕ್ತಿ (ಪಿ.18103) ಕೆಮ್ಮು, ಶ್ವಾಸಕೋಶದ ಸೋಂಕು ಸಮಸ್ಯೆಯಿಂದ ಜೂನ್ 30ಕ್ಕೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಇರುವುದು ಜುಲೈ 3ರಂದು ದೃಢಪಟ್ಟಿತ್ತು. ಮರುದಿನ ಮೃತಪಟ್ಟಿದ್ದರು.
ಮೂವರಿಗೆ ಕೊರೊನಾ: ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದ 59 ವರ್ಷದ ವ್ಯಕ್ತಿಗೆ (ಪಿ.23564) ಶೀತಜ್ವರ ಎಂದು ಗುರುತಿಸಲಾಗಿದೆ. ಹರಿಹರ ಇಂದಿರಾನಗರ 28 ವರ್ಷದ ಮಹಿಳೆಗೆ (pi.23565) 39 ವರ್ಷದ ಆರೋಗ್ಯ ಕಾರ್ಯಕರ್ತೆಯ (ಪಿ.11156) ಸಂಪರ್ಕದಿಂದ ಸೋಂಕು ತಗುಲಿದೆ. ಆಂಧ್ರಪ್ರದೇಶದ ರಾಯದುರ್ಗದಿಂದ ಬಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ 63 ವರ್ಷದ ವೃದ್ಧ (ಪಿ.23566) ದಾಖಲಾಗಿದ್ದರು. ಅವರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 359 ಮಂದಿಗೆ ಸೋಂಕು ತಗುಲಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 10 ಮಂದಿ ಸೇರಿ ಒಟ್ಟು 311 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಮೃತಪಟ್ಟಿದ್ದಾರೆ. 36 ಸಕ್ರಿಯ ಪ್ರಕರಣಗಳಿವೆ.
ಕಂಟೈನ್ಮೆಂಟ್ ವಲಯ ಡಿನೋಟಿಫಿಕೇಷನ್: ಆನೆಕೊಂಡ ಕಂಟೈನ್ಮೆಂಟ್ ವಲಯದಲ್ಲಿ 14 ದಿನಗಳಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗದ ಕಾರಣ ಡಿನೋಟಿಫೈ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಈ ಕಂಟೈನ್ಮೆಂಟ್ನಲ್ಲಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದವು. ಜೂನ್ 20ಕ್ಕೆ ಕೊನೇ ಪ್ರಕರಣ ಕಂಡು ಬಂದಿತ್ತು. ಬಳಿಕ ಯಾರಿಗೂ ಸೋಂಕು ಬಂದಿಲ್ಲ. ಹಾಗಾಗಿ ಸೀಲ್ಡೌನ್ ತೆಗೆಯಲಾಗಿದೆ. ಬಫರ್ಝೋನ್ ಕೂಡ ಡಿನೋಟಿಫೈ ಮಾಡಲಾಗಿದೆ.
ಮನೆ ಸೀಲ್ಡೌನ್
ಮಲೇಬೆನ್ನೂರು: ಕೊರೊನಾ ಪಾಸಿಟಿವ್ ಇದ್ದ ದಾವಣಗೆರೆಯ ವ್ಯಕ್ತಿ ಪಟ್ಟಣದಲ್ಲಿನ ಬಸವೇಶ್ವರ ಬಡಾವಣೆ ಮನೆಯೊಂದಕ್ಕೆ ಭೇಟಿ ನೀಡಿದ್ದ ಕಾರಣ ಆ ಮನೆಯನ್ನು ಸೋಮವಾರ ಸೀಲ್ಡೌನ್ ಮಾಡಲಾಗಿದೆ. 13 ಜನರಿಗೆ ಹೊಂ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ವೈರಸ್ ಸೊಂಕಿತ ವ್ಯಕ್ತಿ, ಅವರ ಪತ್ನಿ, ಮಗು ದಾವಣಗೆರೆ ಗಾಂಧಿನಗರ ಚೌಕಿಪೇಟೆ ನಿವಾಸಿಗಳು. ಅವರ ಸಂಬಂಧಿಯೊಬ್ಬರು ಮೃತಪಟ್ಟಿದ್ದು, ಜುಲೈ 4ರಂದು ನಡೆದಿದ್ದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ಉಪತಹಶೀಲ್ದಾರ್ ರವಿ, ಕಂದಾಯ ನಿರೀಕ್ಷಕ ಸಮೀರ್ ಅಹ್ಮದ್ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಧರಣೀಂದ್ರ ಕುಮಾರ್, ಆರೋಗ್ಯ ನಿರೀಕ್ಷಕರು, ಪೊಲೀಸ್ ಹಾಗೂ ಅರೋಗ್ಯ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯ ಭಾನುವಳ್ಳೀ ಸುರೇಶ್ ಸ್ಥಳಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.