ದಾವಣಗೆರೆ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಮಿಂಚು, ಗುಡುಗು ಸಹಿತ ಜೋರು ಮಳೆ ಸುರಿಯಿತು. ಮಧ್ಯಾಹ್ನದಿಂದ ಬಿಸಿಲ ಝಳ ಹೆಚ್ಚಿತ್ತು. ರಾತ್ರಿ 10ಗಂಟೆಗೆ ಆರಂಭವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಸುರಿಯಿತು.
ಜಿಲ್ಲೆಯ ಜಗಳೂರು, ಹರಿಹರ, ಮಲೇಬೆನ್ನೂರು, ಸಂತೇಬೆನ್ನೂರು, ನ್ಯಾಮತಿ ತಾಲ್ಲೂಕಿನ ರಾಮೇಶ್ವರಗಳಲ್ಲಿ ಮಳೆಯಾಗಿದೆ. ಹರಪನಹಳ್ಳಿ ಕಸಬಾ ಹೋಬಳಿ ಜೋರು ಮಳೆ ಸುರಿದಿದೆ.ಅನೇಕ ಕಡೆ ಹಳ್ಳಕೊಳ್ಳಗಳಿಗೆ ನೀರು ತುಂಬಿದ್ದು, ಕೆಲವೆಡೆ ಮನೆ ಹಾಗೂ ಬೆಳೆಗಳಿಗೆ ಹಾನಿ ಮಾಡಿದೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ರೈಲ್ವೆ ಬ್ರಿಡ್ಜ್ ಅಂಡರ್ಪಾಸ್, ಅಶೋಕ ರಸ್ತೆ ಮುಂತಾದ ಕಡೆ ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಯಿತು.