ಮಲೇಬೆನ್ನೂರು: ಸೋಂಕಿತರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲು ಅಧಿಕಾರಿಗಳು ಮನವೊಲಿಸಲು ಹರಸಾಹಸಪಡುವಂತಾಗಿದೆ.
ಪಟ್ಟಣದಲ್ಲಿ ಪ್ರತಿನಿತ್ಯ ಸರಾಸರಿ 5 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದು, ಅವರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸುವುದು ಅಧಿಕಾರಿಗಳಿಗೆ ತಲೆನೋವಾಗಿದೆ.
ಶನಿವಾರ ಪಟ್ಟಣದ ವಿವಿಧ ಬಡಾವಣೆಗಳ ಸೋಂಕಿತರ ಮನೆಗಳಿಗೆ ಪುರಸಭೆ ಮುಖ್ಯಾಧಿಕಾರಿ ನಿಟುವಳ್ಳಿ ದಿನಕರ್, ಪರಿಸರ ಎಂಜಿನಿಯರ್ ಉಮೇಶ್, ಆರೋಗ್ಯಾಧಿಕಾರಿ ಗುರುಪ್ರಸಾದ್, ನವೀನ್ ಕಟ್ಟೀಮನಿ, ಎಎಸ್ಐ ಹನುಮಂತಪ್ಪ ಭೇಟಿ ನೀಡಿ ಕೊರೊನಾ ತಡೆಗಟ್ಟಲು ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯುವಂತೆ ಕೋರಿದರು.
ಕೆಲವರು ಮನೆಯಲ್ಲೇ ಚಿಕಿತ್ಸೆ ನೀಡುವಂತೆ ಕೋರಿದರು. ಆದರೆ ಒಪ್ಪದ ಅಧಿಕಾರಿಗಳು ಕೊಂಡಜ್ಜಿ ಕೋವಿಡ್ ಕೇಂದ್ರಕ್ಕೆ ಕಳುಹಿಸಿದರು.
ಸಮೀಪದ ಕಡಾರನಾಯ್ಕನಹಳ್ಳಿ, ನಂದಿಗಾವಿ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ 100ಕ್ಕೂ ಹೆಚ್ಚು ನಾಗರಿಕರಿಗೆ ಕೊರೊನಾ ಲಸಿಕೆ ಹಾಕಿದರು.
ಟಿಎಚ್ಒ ಡಾ. ಚಂದ್ರಮೋಹನ್, ರೈತ ಸಂಘದ ಪ್ರಭುಗೌಡ, ಆರೋಗ್ಯ ನಿರೀಕ್ಷಕ ಉಮ್ಮಣ್ಣ, ಬಿಎಲ್ಒ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.