ದಾವಣಗೆರೆ: ಗುರುವಾರ ಮಹಾ ಶಿವರಾತ್ರಿ. ಹಬ್ಬದ ಅಂಗವಾಗಿ ದೇವನಗರಿಯಲ್ಲಿ ಶಿವನ ದರ್ಶನಕ್ಕೆ ದೇವಾಲಯಗಳು ಸಜ್ಜುಗೊಂಡಿವೆ.
ದೇವಾಲಯಗಳ ಒಳಭಾಗಗಳು ಗರ್ಭಗುಡಿಗಳು ಹೂವಿನಿಂದ ಅಲಂಕೃತಗೊಂಡಿದ್ದು, ಕೊರೊನಾ ಕಾರಣದಿಂದ ಜನಜಂಗುಳಿ ತಪ್ಪಿಸಲು ಹಾಗೂ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ ದೇವಾಲಯಗಳ ಗೋಡೆಗಳಲ್ಲಿ ಫಲಕ ಹಾಕಲಾಗಿದೆ.
ನಗರದ ಅಶೋಕ ರೈಲ್ವೆ ಗೇಟ್ ಬಳಿಯ ಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ 6ರಿಂದ 1ಗಂಟೆಯವರೆಗೆ ಅಭಿಷೇಕ ನಡೆಯಲಿದ್ದು, ಆ ಬಳಿಕ ರಾತ್ರಿ ಇಡೀ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
‘ಕೊರೊನಾ ಕಾರಣದಿಂದಾಗಿ ದೇವಾಲಯದ ಬಾಗಿಲ ಬಳಿ ಸ್ಯಾನಿಟೈಸರ್ ಇಟ್ಟಿದ್ದೇವೆ. ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲು ಭದ್ರತಾ ಸಿಬ್ಬಂದಿ ನಿಯೋಜಿಸ
ಲಾಗುವುದು. ಗರ್ಭಗುಡಿಯ ಬಳಿ ಒಂದು ಬಾರಿಗೆ 4ರಿಂದ 5ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮಂಜುನಾಥ್ ಹಾಗೂ ಸದಸ್ಯ ಸೋಮಶೇಖರ್.
ನಗರದ ಹೊಂಡದ ಸರ್ಕಲ್ ಬಳಿಯ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹೋಮ ನಡೆಯಿತು. ಗುರುವಾರ ಬೆಳಿಗ್ಗೆ 6ಕ್ಕೆ ಅಭಿಷೇಕ ನಡೆಯಲಿದೆ. ದೇವರ ಹೂವಿನ ಅಲಂಕಾರದ ನಂತರ ರಾತ್ರಿ ಪೂರ್ತಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಶುಕ್ರವಾರ ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ಇದೆ.
‘ಪಿ.ಬಿ.ರಸ್ತೆಯ ಬೀರಲಿಂಗೇಶ್ವರ ದೇವಸ್ದಾನದಲ್ಲಿ ಗುರುವಾರ ಬೆಳಿಗ್ಗೆ 6.30ಕ್ಕೆ ಸ್ವಾಮಿಗೆ ವಿಶೇಷ ಪುಷ್ಪಾಲಂಕಾರ, ಅಭಿಷೇಕ ಪೊಜೆ ನಡೆಯಲಿದೆ. ರಾತ್ರಿ 7.30ರಿಂದ ಜಾಗರಣೆ ಇರಲಿದ್ದು, ನಂತರ ಫಲಹಾರ ಇರುತ್ತದೆ’ ಎಂದು ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಜೆ.ಕೆ.ಕೊಟ್ರಬಸಪ್ಪ ತಿಳಿಸಿದ್ದಾರೆ.
ಮಾ.12ರಂದು ಮಧ್ಯಾಹ್ನ 12.30ಕ್ಕೆ ಸಮಿತಿಯಿಂದ ಅನ್ನಸಂತರ್ಪಣೆ ಇದೆ ಎಂದು ಸಮಿತಿಯ ಕೆಂಗೋ ಹನುಮಂತಪ್ಪ, ಬಿ.ಎಚ್. ಪರುಶುರಾಮಪ್ಪ ತಿಳಿಸಿದ್ದಾರೆ.
ಇಲ್ಲಿನ ಜಯನಗರದ ಬೀರೇಶ್ವರ ಬಡಾವಣೆಯ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಗುರುವಾರ ಸಂಜೆ 7.30ಕ್ಕೆ ಮಹಾಪೂಜೆ, ರಾತ್ರಿ 9ರಿಂದ ಜಾಗರಣೆ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 11ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.
ಪ್ರಸಾದದ ವ್ಯವಸ್ಥೆ:ಶಿವರಾತ್ರಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ನಗರ ಘಟಕದಿಂದ ಮಾ.11ರ ಬೆಳಿಗ್ಗೆ 11.30ಕ್ಕೆ ಗೀತಾಂಜಲಿ ಚಿತ್ರಮಂದಿರದ ಬಳಿಯಿರುವ ಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ನಗರ ಘಟಕ ಅಧ್ಯಕ್ಷೆ ಪುಷ್ಪಾ ವಾಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.