ದಾವಣಗೆರೆ: ‘ಯಾವ ಧರ್ಮವು ನ್ಯಾಯ, ಸಮಾನತೆಯನ್ನು ಬೋಧಿಸುವುದಿಲ್ಲವೋ ಅದು ಧರ್ಮ ಎನಿಸಿಕೊಳ್ಳುವುದಿಲ್ಲ. ಮನುಷ್ಯ, ಮಾನವೀಯತೆ ಇಲ್ಲದ ಧರ್ಮ ಶುದ್ಧೀಕರಣವಾಗಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಸನಾತನವಾದಿಗಳು ಶೂದ್ರ ಶಕ್ತಿಗಳಿಗೆ ಓದುವುದನ್ನೇ ಕಲಿಸಿರಲಿಲ್ಲ. ಎಲ್ಲವನ್ನೂ ಮುಚ್ಚಿಟ್ಟಿದ್ದರು. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ಮುಕ್ತವಾಗಿ ವಿದ್ಯೆ ಕಲಿತರು. ಡಾ.ಬಿ.ಆರ್. ಅಂಬೇಡ್ಕರ್ ಇಲ್ಲದಿದ್ದರೆ ದಲಿತರಿಗೆ ಇಂಗ್ಲಿಷ್ ಕಲಿಯಲು, ಸಂಶೋಧನೆ, ಅಧ್ಯಯನ ಮಾಡಲು ಆಗುತ್ತಿತ್ತೇ? ಪ್ರಪಂಚದಲ್ಲೇ ನಂಬರ್–1 ಬುದ್ಧಿಶಕ್ತಿಯ (ಇಂಟೆಲೆಕ್ಚ್ಯುಲ್) ರಾಷ್ಟ್ರ ಎಂದು ಕರೆಸಿಕೊಳ್ಳಲು ಆಗುತ್ತಿತ್ತೇ?, ದಲಿತರು ಅಕ್ಷರ ಕಲಿತರೆ ಕಾದ ಎಣ್ಣೆಯನ್ನು ಕಿವಿಯಲ್ಲಿ ಹಾಕುತ್ತಿದ್ದರು ಎಂದು ಹೇಳಿದರು.
ಧರ್ಮ ಬೇಡ ಎಂದು ಅಂಬೇಡ್ಕರ್ ಅವರು ಹೇಳಿರಲಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಬೇಕು. ಮನುಷ್ಯತ್ವ, ಮಾನವೀಯತೆ ಮುಖ್ಯ. ಮನುಷ್ಯ ಹುಟ್ಟಿದ ನಂತರವೇ ಧರ್ಮ ಹುಟ್ಟಿದ್ದು. ಸಂವಿಧಾನಕ್ಕಿಂತ ಯಾವುದೇ ಧರ್ಮ, ವ್ಯಕ್ತಿ ಮೇಲಲ್ಲ. ನ್ಯಾಯ, ಸಮಾನತೆ ಎತ್ತಿ ಹಿಡಿಯುವುದೇ ನಿಜವಾದ ಧರ್ಮ ಎಂದು ಪ್ರತಿಪಾದಿಸಿದ್ದರು ಎಂದರು.
ಸಾಲ ಮನ್ನಾ ಮಾಡಿದರೆ ದಿವಾಳಿಯಾಗುವುದಿಲ್ಲವೇ?
ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎನ್ನುವುದಾದರೆ ಅಂಬಾನಿ, ಅದಾನಿ ಅಂಥವರ ಸಾಲವನ್ನು ಮನ್ನಾ ಮಾಡಿದರೆ ದೇಶ ದಿವಾಳಿಯಾಗುವುದಿಲ್ಲವೇ? ಎಂದು ಮಹದೇವಪ್ಪ ಪ್ರಶ್ನಿಸಿದರು.
ಪ್ರಧಾನಿ ಮೋದಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಸರ್ಕಾರದ ಯೋಜನೆಗಳು ₹ 1.32 ಕೋಟಿ ಬಡವರನ್ನು ಮುಟ್ಟುತ್ತಿವೆ. ಇದರಿಂದ ಅವರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡಿ ಗೊತ್ತಿಲ್ಲ’ ಎಂದು ಟೀಕಿಸಿದರು.