ಹುಬ್ಬಳ್ಳಿ: ಪುನೀತ್ ನೇತ್ರದಾನದ ಬಳಿಕ ನೇತ್ರ ವಿಜ್ಞಾನ ಸಂಸ್ಥೆಗೆ 500 ಕರೆ

ಹುಬ್ಬಳ್ಳಿ: ನಟ ದಿವಂಗತ ಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿದ ಬಳಿಕ ಜನರಲ್ಲಿ ಕಣ್ಣುಗಳ ದಾನದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ಹಿಂದಿನ 10 ದಿನಗಳಲ್ಲಿ 500ಕ್ಕೂ ಹೆಚ್ಚು ಜನ ನೇತ್ರದಾನದ ಬಗ್ಗೆ ವಿಚಾರಣೆ ಮಾಡಲು ಕರೆ ಮಾಡಿದ್ದಾರೆ ಎಂದು ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಜೋಶಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ‘ದೃಷ್ಟಿ ಭಾಗ್ಯವಿಲ್ಲದ ಸುಮಾರು 25 ಲಕ್ಷ ಜನ ಭಾರತದಲ್ಲಿದ್ದಾರೆ. ಸುಮಾರು 15 ಲಕ್ಷ ಜನ ಅಂಧರು ಕಾರ್ನಿಯಾದಿಂದ ಬಳಲುತ್ತಿದ್ದಾರೆ. ಇದರಲ್ಲಿ ಮೂರನೇ ಒಂದರಷ್ಟು 14 ವರ್ಷದ ಒಳಗಿನ ಮಕ್ಕಳೇ ಇದ್ದಾರೆ. ಈಗ ಜನರಲ್ಲಿ ಮೂಡಿರುವ ನೇತ್ರದಾನದ ಜಾಗೃತಿ ಅಭಿಯಾನ ಭವಿಷ್ಯದಲ್ಲಿಯೂ ಮುಂದುವರಿದರೆ ಭಾರತವನ್ನು ಕಾರ್ನಿಯಾ ಮುಕ್ತ ಮಾಡುವುದರಲ್ಲಿ ಅನುಮಾನವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಮರಣಾನಂತರ ನೇತ್ರದಾನ ಮಾಡಲು ಬಹಳಷ್ಟು ಜನ ಶಪಥ ಪತ್ರವನ್ನು ಬರೆದುಕೊಡುತ್ತಿದ್ದಾರೆ. ಬುಧವಾರ ನಗರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಸುಚಿತ್ ಅಂಗಡಿ ಹಾಗೂ ರಜನಿ ನೇತ್ರದಾನ ಜಾಗೃತಿ ಹಾಗೂ ಶಪಥ ಮಾಡಲಿದ್ದಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.