ನವಲಗುಂದ: ‘ಕೃಷಿ ಪತ್ತಿನ ಸಂಘವು ಸಾಲ ನೀಡುವುದೇ ಮುಖ್ಯ ಉದ್ದೇಶವಲ್ಲ. ಸದಸ್ಯರಲ್ಲಿ ಸ್ವಾವಲಂಬನೆ, ಆದಾಯ ಹೆಚ್ಚಿಸಿಕೊಳ್ಳಲು ಉತ್ತೇಜನ ನೀಡುವುದು, ವಲಸೆ ಹೋಗುತ್ತಿರುವ ಯುವಕರಲ್ಲಿ ಕೃಷಿಕರಾಗಿ ಬದುಕುವ ಧೈರ್ಯ ತುಂಬುವುದು ಸಹಕಾರಿ ಸಂಘದ ಉದ್ದೇಶವಾಗಲಿ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲ್ಲೂಕಿನ ತಡಹಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಡಹಾಳ - ಅರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ಹಾಗೂ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸಂಘದ ನೂತನ ಗುದಾಮು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಗ್ರಾಮದಲ್ಲಿ ಸಹಕಾರಿ ಕ್ಷೇತ್ರಕ್ಕೆ ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿ ದೊರೆತಿದ್ದು ಸಂಸ್ಥೆ ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿದೆ’ ಎಂದರು. ಇದೆ ವೇಳೆ ಸಂಸದರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ‘ಕಷ್ಟಕಾಲದಲ್ಲಿ ಜನರ ಕೈ ಹಿಡಿದು ಆರ್ಥಿಕ ಶಕ್ತಿ ತುಂಬುವ ಈ ಸಹಕಾರಿ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಗ್ರಾಮದ ಹಿರಿಯರ ದೂರದೃಷ್ಟಿತ್ವವೇ ಕಾರಣ. ಗ್ರಾಮೀಣ ಭಾಗದ ಸಹಕಾರಿ ಸಂಘವೊಂದು ಶತಮಾನೋತ್ಸವ ಪೂರೈಸಿರುವುದು ಶ್ಲಾಘನೀಯ’ ಎಂದರು
ಗದಗ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ನರಗುಂದದ ಪಂಚಾಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ತಡಹಾಳ- ಅರಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ತಿಪ್ಪಣ್ಣ ಬಳಗಲಿ, ಸಿದ್ದಣ್ಣ ಕಿಟಗೇರಿ, ಹಾಗೂ ಸಹಕಾರಿ ಕ್ಷೇತ್ರದ ಗಣ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು.