ಹುಬ್ಬಳ್ಳಿ: ಕೋವಿಡ್ ಹಾಗೂ ಲಾಕ್ಡೌನ್ನಿಂದಾಗಿ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಶೇ 50ರಷ್ಟು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಎಂಎಸ್ಎಂಇ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಇದರ ಜೊತೆಗೆ ಕೆಎಸ್ಎಫ್ಸಿ ಹಾಗೂ ಬ್ಯಾಂಕುಗಳಿಂದ ಪಡೆದ ಅವಧಿ ಸಾಲದ ಮಾಸಿಕ ಕಂತುಗಳ ಮರುಪಾವತಿಗೆ ಕನಿಷ್ಠ ಒಂದು ವರ್ಷ ಸಮಯ ನೀಡಬೇಕು. ಎಂಎಸ್ಎಂಇ ಘಟಕಗಳು ಈಗಾಗಲೇ ಪಡೆದುಕೊಂಡ ಅವಧಿ ಸಾಲದ ಕನಿಷ್ಠ ಶೇ 50ರಷ್ಟು ಪ್ರತಿಶತ ಹೆಚ್ಚುವರಿ ಸಾಲವನ್ನು ಈಗಿರುವ ಭದ್ರತಾ ಆಧಾರದ ಮೇಲೆ ಕಡಿಮೆ ಬಡ್ಡಿಯಲ್ಲಿ ಮಂಜೂರು ಮಾಡಬೇಕು. ಕೆಎಸ್ಐಡಿಸಿ ಹಾಗೂ ಕೆಐಎಡಿಬಿ ಸಂಸ್ಥೆಗಳಿಂದ ಘಟಕಗಳಿಗೆ ಹಂಚಿಕೆಯಾದ ಭೂಮಿಯಲ್ಲಿ ಕಟ್ಟಡ ನಿರ್ಮಿಸಿ ಕಾರ್ಯ ನಿರ್ವಹಿಸುವ ದಿನಾಂಕವನ್ನು ಕನಿಷ್ಠ ಎರಡು ವರ್ಷಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಂಎಸ್ಎಂಇ ಘಟಕಗಳಿಗೆ ಬಾಕಿಯಿರುವ ಸಹಾಯ ಧನವನ್ನು ಕೂಡಲೇ ಹಂಚಿಕೆ ಮಾಡಬೇಕು, ಬೇಡಿಕೆಗೆ ತಕ್ಕಷ್ಟು ಆಮ್ಲಜನಕವನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ ಕೋರಿದ್ದಾರೆ.