ಗಜೇಂದ್ರಗಡ: ಪಟ್ಟಣದ ಹೊರವಲಯದ ಹೊಲವೊಂದರಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ದಾಸ್ತಾನಿನ ಮೇಲೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಪ್ರಭಾರಿ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ ನೇತೃತ್ವದ ತಂಡ ದಾಳಿ ನಡೆಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಹತ್ತಿರದ ಹೊಲವೊಂದರಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಚೀಲಗಳನ್ನು ಸಂಗ್ರಹಿಸಿದ್ದ ಸ್ಥಳಕ್ಕೆ ಶನಿವಾರ ಸಂಜೆ 4ಗಂಟೆ ಸುಮಾರಿಗೆ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಅಕ್ಕಿಯನ್ನು ವಶಕ್ಕೆ ಪಡೆದರು. ನಂತರ ತಹಶೀಲ್ದಾರ್ ರಜನಿಕಾಂತ ಕೆಂಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ ತಳ್ಳಿಹಾಳ, ಗ್ರಾಮಲೆಕ್ಕಾಧಿಕಾರಿ ಉಮೇಶ ಅರಳಿಗಿಡದ, ಪಿಎಸ್ಐ ರಾಘವೇಂದ್ರ ಎಸ್. ಹಾಗೂ ಸಿಬ್ಬಂದಿಗಳು ಇದ್ದರು.
ಸಕಾಲಕ್ಕೆ ಬಾರದ ವಾಹನಗಳು
ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದ ಜಪ್ತಿ ಮಾಡಿದ ಅಕ್ಕಿ ಚೀಲಗಳನ್ನು ಸಾಗಿಸಲು ವಾಹನಗಳು ಸಕಾಲದಲ್ಲಿ ಬರದ ಕಾರಣ ಅಧಿಕಾರಿಗಳು ರಾತ್ರಿ 9 ಗಂಟೆವರೆಗೆ ಪರದಾಡಿದರು. ನಂತರ ಪೊಲೀಸ್ ಸಿಬ್ಬಂದಿಗಳು ರಾತ್ರಿಯಿಡೀ ಅಕ್ಕಿ ಚೀಲಗಳನ್ನು ಕಾಯುವಂತಾಯಿತು. ಭಾನುವಾರ ಲಾರಿಗಳಲ್ಲಿ ಜಪ್ತಿ ಮಾಡಿದ ಪಡಿತರ ಅಕ್ಕಿ ಚೀಲಗಳನ್ನು ಲೋಡ್ ಮಾಡಿ ಸಂಜೆ ಸಾಗಿಸಲಾಯಿತು.
****
ಗಜೇಂದ್ರಗಡ ಹೊರವಲಯದ ಹೊಲದಲ್ಲಿ ಸಂಗ್ರಹಿಸಿದ್ದ 216 ಪ್ಯಾಕೆಟ್ ಗಳ ಒಟ್ಟು 44.3 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
- ಮಂಜುನಾಥ ತಳ್ಳಿಹಾಳ, ಆಹಾರ ಇಲಾಖೆಯ ನಿರೀಕ್ಷಕರು, ಗಜೇಂದ್ರಗಡ-ರೋಣ